ಬೆಂಗಳೂರು: ‘ಸುಪ್ರೀಂ ಕೋರ್ಟ್ ತೀರ್ಪಿನ ಅನುಸಾರ ನಿವೃತ್ತ ನೌಕರರಿಗೆ ಕನಿಷ್ಠ ಪಿಂಚಣಿ ನೀಡುವಲ್ಲಿ ಇಪಿಎಫ್ಒ ವಿಳಂಬ ನೀತಿ ಅನುಸರಿಸುತ್ತಿದೆ‘ ಎಂದು ಆರೋಪಿಸಿ ಎನ್ಎಸಿ, ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿಯ ನಿವೃತ್ತ ನೌಕರರು ಸೋಮವಾರ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು.
ನೂರಾರು ನೌಕರರು ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದು, ಬೇಡಿಕೆಗಳ ಮನವಿಪತ್ರವನ್ನು ಪ್ರಾದೇಶಿಕ ಭವಿಷ್ಯ ನಿಧಿ ಆಯುಕ್ತರಿಗೆ ನೀಡಲಾಯಿತು.
‘ಇಪಿಎಫ್ಒ, ಪಿಂಚಣಿದಾರರ ವಿಷಯದಲ್ಲಿ ನಿರ್ಲಕ್ಷ್ಯ ತೋರಲಾಗುತ್ತಿದೆ. ಸುಪ್ರೀಂ ಕೋರ್ಟ್ನ ತೀರ್ಪನ್ನು ಜಾರಿಗೆ ತರಲು ವಿಳಂಬ ನೀತಿ ಅನುಸರಿಸಲಾಗುತ್ತಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸರ್ಕಾರ ಮತ್ತು ನ್ಯಾಯಾಲಯಕ್ಕೆ ಪಿಂಚಣಿ ನಿಧಿಯ ವಾಸ್ತವ ಅಂಕಿಅಂಶಗಳನ್ನು ನೀಡದೇ, ಕನಿಷ್ಠ ಪಿಂಚಣಿ ಹೆಚ್ಚಿಸಲು ಇಪಿಎಫ್ಒ ಅಧಿಕಾರಿ ವರ್ಗ ಹಿಂದೇಟು ಹಾಕುತ್ತಿದೆ. ನ್ಯಾಯ ಸಿಗುವವರೆಗೂ ದೀರ್ಘ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.
‘ಹಿಂದಿನ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಆದರೆ, ಈಡೇರಿಸಲಿಲ್ಲ. ನಮ್ಮ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ಧ್ವನಿ ಎತ್ತುವಂತೆ ಆಗ್ರಹಿಸಿ ಈ ಬಾರಿಯ ಚುನಾವಣೆಯಲ್ಲಿ ಆಯ್ಕೆಯಾಗುವ ಸಂಸದರ ಮನೆ ಹಾಗೂ ಕಚೇರಿಗೆ ಮುತ್ತಿಗೆ ಹಾಕಲಾಗುವುದು’ ಎಂದು ತಿಳಿಸಿದರು.
ಪ್ರತಿಭಟನಾ ಸಭೆಯಲ್ಲಿ ಜಿ.ಎಸ್.ಎಂ. ಸ್ವಾಮಿ, ನಂಜುಂಡೇಗೌಡ, ಶಂಕರ್ ಕುಮಾರ್, ಸುಬ್ಬಣ್ಣ, ಹುಚ್ಚಪ್ಪ, ಶ್ರೀನಿವಾಸರೆಡ್ಡಿ ಭಾಗವಹಿಸಿದ್ದರು.