ಬೆಂಗಳೂರು: ಚಿತ್ರ ನಿರ್ಮಾಪಕ, ಕಾಂಗ್ರೆಸ್ ಮುಖಂಡ ಉಮಾಪತಿ ಶ್ರೀನಿವಾಸಗೌಡ ಹಾಗೂ ಸಾಮಾಜಿಕ ಕಾರ್ಯಕರ್ತ ವಿಜಯ್ ಡೆನ್ನಿಸ್ ಎಂಬುವರ ನಡುವೆ ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ನಡೆದಿದೆ ಎಂದು ಹೇಳಲಾದ ಆಡಿಯೊ ಸಂಭಾಷಣೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.
ಉಮಾಪತಿ ಅವರು ಕಳೆದ ಚುನಾವಣೆಯಲ್ಲಿ ಬೊಮ್ಮನಹಳ್ಳಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.
ಸಂಭಾಷಣೆಯಲ್ಲಿ ಏನಿದೆ?:
ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಅದೇ ಠಾಣೆಯಲ್ಲಿ ಉಳಿಯುವ ವಿಚಾರ, ಸಚಿವರೊಬ್ಬರಿಗೆ ಹಣ ನೀಡಿರುವುದು, ನಾನು ಹೇಳಿದರೆ ಸರ್ಕಾರದ ಹಂತದಲ್ಲಿ ಕೆಲಸ ಆಗುವ ಕುರಿತು ಪ್ರಸ್ತಾಪಿಸಲಾಗಿದೆ.
ಈ ಆಡಿಯೊ ಬಹಿರಂಗವಾದ ಮೇಲೆ ಉಮಾಪತಿ ಅವರು ತನಿಖೆಗೆ ಆಗ್ರಹಿಸಿ ಎಚ್ಎಸ್ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.
ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಉಮಾಪತಿ, ‘ಕಾನೂನು ಹೋರಾಟ ನಡೆಸುತ್ತೇನೆ. ನನ್ನ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಆ ಇನ್ಸ್ಪೆಕ್ಟರ್ ಯಾರು ಎಂದು ಆತ ತಿಳಿಸಬೇಕು’ ಎಂದು ಆಗ್ರಹಿಸಿದರು.
‘ಯಾರು ತಪ್ಪಿತಸ್ಥರಿದ್ದಾರೆ ಅವರ ವಿರುದ್ಧ ಕ್ರಮ ಆಗಬೇಕು. ಅಲ್ಲಿ ತನಕ ಹೋರಾಟ ನಿರಂತರ. ಡಿಸಿಪಿ, ನಗರ ಪೊಲೀಸ್ ಆಯುಕ್ತರು, ಲೋಕಾಯುಕ್ತಕ್ಕೂ ದೂರು ಕೊಡುತ್ತೇನೆ’ ಎಂದು ಹೇಳಿದರು.