ಬೆಂಗಳೂರು: ಮಲ್ಲೇಶ್ವರದ ಕೋದಂಡರಾಮಪುರದಲ್ಲಿ ಇದೇ 10 ರಿಂದ 12ರವರೆಗೆ ಗಂಗಮ್ಮ ದೇವಿ ಜಾತ್ರೆ ಮತ್ತು ಹಸಿ ಕರಗದ ಮಹೋತ್ಸವ ನಡೆಯಲಿದೆ ಎಂದು ಕಾಡುಮಲ್ಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ. ಶಿವರಾಂ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘96ನೇ ವರ್ಷದ ಗಂಗಮ್ಮ ದೇವಿಯ ಕರಗದ ಮಹೋತ್ಸವ ಮೂರು ದಿನ ನಡೆಯಲಿದ್ದು, ಚಂಗವಲ್ಲ ನಾಯಕರ್ ಕುಟುಂಬದವರು ಗಂಗಮ್ಮ ದೇವಿಯ ಪೂಜೆ ನೆರವೇರಿಸಲಿದ್ದಾರೆ. ಜೂನ್ 10ರಂದು ಸಂಜೆ 5ಕ್ಕೆ ನಡೆಯಲಿರುವ ಕ್ಷೀರಕುಂಭ ಮೆರವಣಿಗೆಯಲ್ಲಿ ಕಳಸ ಹೊತ್ತ ಮಹಿಳೆಯರು ಭಾಗವಹಿಸಲಿದ್ದಾರೆ’ ಎಂದರು.
ಜೂನ್ 11ರಂದು ಬೆಳಿಗ್ಗೆ 6ಕ್ಕೆ ಗಂಗಮ್ಮ ದೇವಿಗೆ ಮಾಂಗಲ್ಯ ಸೂತ್ರಧಾರಣೆ, ಮಹಾಮಂಗಳಾರತಿ. ಮಧ್ಯಾಹ್ನ 12ಕ್ಕೆ ಕುಂಭನೈವೇದ್ಯ, ಮಹಾಮಂಗಳಾರತಿ ಸಂಜೆ 7ಕ್ಕೆ ಹಸಿ ಹೂವಿನ ಕರಗವು ದೇವಸ್ಥಾನದಿಂದ ಹೊರಟು ವೈಯಾಲಿ ಕಾವಲ್, ಮಲ್ಲೇಶ್ವರದ ವಿವಿಧ ರಸ್ತೆಗಳ ಮೂಲಕ ಬೆಳಗಿನ ಜಾವ 2ಗಂಟೆಗೆ ದೇವಸ್ಥಾನಕ್ಕೆ ತಲುಪಲಿದೆ’ ಎಂದು ತಿಳಿಸಿದರು.
ಜೂ. 12ರಂದು ಬೆಳಗ್ಗೆ 9.30ಕ್ಕೆ ಸುಮಂಗಲಿ ಪೂಜೆ ಮಧ್ಯಾಹ್ನ 12ಕ್ಕೆ ಕೋದಂಡರಾಮಪುರ ಪ್ರೌಡಶಾಲೆಯ ಆಟದ ಮೈದಾನದಲ್ಲಿ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 5.30ಕ್ಕೆ ದೇವಿಯ ರಥೋತ್ಸವ ಜರುಗಲಿದೆ’ ಎಂದರು.
‘ಬೆಂಗಳೂರು ಧರ್ಮಸ್ವಾಮಿ ದೇವಸ್ಥಾನದಲ್ಲಿ ಜರುಗುವ ಕರಗದಲ್ಲಿರುವ ಆಚರಣೆ, ಸಂಪ್ರದಾಯ, ಪೂಜೆಯ ಶೈಲಿಯನ್ನು ಗಂಗಮ್ಮ ದೇವಿ ಹಸಿ ಕರಗದಲ್ಲಿ ಅಚರಿಸಲಾಗುತ್ತಿದೆ. ರೋಗ, ರುಜಿನಗಳು ಬರಬಾರದು, ನಾಡಿನ ಜನರಿಗೆ ಸುಖ–ಶಾಂತಿ ನೆಮ್ಮದ್ದಿ ಲಭಿಸಲಿ ಎಂದು ಗಂಗಮ್ಮ ದೇವಿಯ ಪೂಜೆ ಮಾಡಲಾಗುತ್ತಿದೆ’ ಎಂದು ಹೇಳಿದರು.