ಬೆಂಗಳೂರು: ‘ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರು ಹೇಳಿಕೆ ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಹೇಳಿಕೆ ನೀಡಿದವರೂ ವಿಚಾರಣೆ ಎದುರಿಸಬೇಕಾಗಬಹುದು’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಪ್ರಕರಣದ ಸಂಬಂಧ ಜೆಡಿಎಸ್ ರಾಜ್ಯ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ನಿರಂತರ ಹೇಳಿಕೆ ಕುರಿತು ಗಮನಸೆಳೆದಾಗ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಇಬ್ಬರೂ ಪ್ರಕರಣದ ಗಂಭೀರತೆ ಅರಿತಿದ್ದಾರೆ ಎಂಬ ವಿಶ್ವಾಸವಿದೆ’ ಎಂದರು.
‘ರಾಜಕೀಯ ನಾಯಕರ ಹೇಳಿಕೆಗಳಿಗೆ ಪದೇ ಪದೇ ಪ್ರತಿಕ್ರಿಯಿಸಲಾಗದು. ಹೇಳಿಕೆ ನೀಡುವವರನ್ನು ವಿಚಾರಣೆ ನಡೆಸಲು ಎಸ್ಐಟಿಗೆ ಕಾನೂನಿನಲ್ಲಿ ಅವಕಾಶವಿದೆ. ನೋಟಿಸ್ ನೀಡಿ ಎಸ್ಐಟಿ ವಿಚಾರಣೆಗೆ ಕರೆಯಬಹುದು. ದೇವರಾಜೇಗೌಡ ಅವರನ್ನು ಪ್ರಜ್ವಲ್ ರೇವಣ್ಣ ಪ್ರಕರಣದಲ್ಲೇ ಬಂಧಿಸಲಾಗಿದೆ. ಮುಂದಿನ ಪ್ರಕ್ರಿಯೆಯನ್ನು ಎಸ್ಐಟಿ ನಿರ್ವಹಿಸುತ್ತದೆ’ ಎಂದರು.
ಎಸ್ಐಟಿ ವಿದೇಶಕ್ಕೆ ಹೋಗುವುದಿಲ್ಲ: ‘ಪ್ರಜ್ವಲ್ ಪತ್ತೆಗೆ ನೇರವಾಗಿ ವಿದೇಶಕ್ಕೆ ಹೋಗಲು ಎಸ್ಐಟಿ ಅಧಿಕಾರಿಗಳಿಗೆ ಅವಕಾಶವಿಲ್ಲ. ಬ್ಲೂ ಕಾರ್ನರ್ ನೋಟಿಸ್ ಆಧರಿಸಿ ಇಂಟರ್ಪೋಲ್ನವರು ಆರೋಪಿಯ ಇರುವಿಕೆ ಕುರಿತು ಸಿಬಿಐಗೆ ಮಾಹಿತಿ ನೀಡುತ್ತಾರೆ. ಸಿಬಿಐ ರಾಜ್ಯದ ಪೊಲೀಸರ ಜತೆ ಮಾಹಿತಿ ಹಂಚಿಕೊಳ್ಳುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
‘ಪ್ರಜ್ವಲ್ ಇರುವಿಕೆ ಕುರಿತು ಈವರೆಗೆ ಇಂಟರ್ಪೋಲ್ನಿಂದ ನಮಗೆ ಯಾವುದೇ ಮಾಹಿತಿ ಬಂದಿಲ್ಲ’ ಎಂದರು.