ಬೆಂಗಳೂರು: ಬಿಎಂಟಿಸಿ ಬಸ್ನಲ್ಲಿ ಗುರುವಾರ ರಾತ್ರಿ ಪ್ರಯಾಣಿಸುತ್ತಿದ್ದ ಕೃಷ್ಣಪ್ಪ (60) ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
‘ಗುರುವಾರ ರಾತ್ರಿ 11ರ ಸುಮಾರಿಗೆ ಮೆಜೆಸ್ಟಿಕ್ನಲ್ಲಿ ಕೃಷ್ಣಪ್ಪ ಅವರು ಬಸ್ ಹತ್ತಿದ್ದರು. ನವರಂಗ್ ಸಮೀಪ ಬಸ್ ಚಲಿಸುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ’ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ಧಾರೆ.
‘ಬಸ್ನಲ್ಲಿ ನಿಂತೇ ಪ್ರಯಾಣಿಸುತ್ತಿದ್ದರು. ಅವರು ಕುಸಿದು ಬಿದ್ದಾಗ ಮೇಲಕ್ಕೆತ್ತಿದ್ದೆವು. ಆಯತಪ್ಪಿ ಬಿದ್ದಿರಬಹುದು ಎಂದು ಆರಂಭದಲ್ಲಿ ಭಾವಿಸಿದ್ದೆವು. ಮತ್ತಷ್ಟು ಬಳಲಿದಂತೆ ಕಂಡ ಅವರನ್ನು ಉಪಚರಿಸಿದರೂ ಆರೋಗ್ಯದಲ್ಲಿ ಸುಧಾರಣೆ ಕಾಣದೇ ಮೃತಪಟ್ಟರು’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
‘ತಕ್ಷಣವೇ ಘಟನೆ ಕುರಿತು ಚಾಲಕ ಹಾಗೂ ನಿರ್ವಾಹಕ ಪೊಲೀಸರಿಗೆ ಮಾಹಿತಿ ನೀಡಿದರು. ಉಳಿದ ಪ್ರಯಾಣಿಕರನ್ನು ಬೇರೊಂದು ಬಸ್ಗೆ ಹತ್ತಿಸಿ, ಬಸವೇಶ್ವರ ನಗರ ಠಾಣೆ ಬಳಿಗೆ ಬಸ್ ತೆಗೆದುಕೊಂಡು ಹೋಗಲಾಯಿತು. ಮೃತ ವ್ಯಕ್ತಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿ ಮೃತದೇಹ ಹಸ್ತಾಂತರ ಮಾಡಲಾಯಿತು’ ಎಂದು ಮೂಲಗಳು ತಿಳಿಸಿವೆ.