ಬೆಂಗಳೂರು: ‘ಕೀಟನಾಶಕ ಹಾಗೂ ರಸಗೊಬ್ಬರದ ಅತಿಯಾದ ಬಳಕೆ ಯಿಂದ ಮಣ್ಣಿನ ಫಲವತ್ತತೆ ಕುಂಠಿತ ಗೊಂಡಿದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ಹೇಳಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸಿಬ್ಬಂದಿ ತರಬೇತಿ ಘಟಕ ಹಾಗೂ ಹೈದರಾಬಾದ್ನ ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿರುವ ‘ನೈಸರ್ಗಿಕ ಕೃಷಿ’ ಕುರಿತು ಐದು ದಿನಗಳ ತರಬೇತಿ ಉದ್ಘಾಟಿಸಿದ ಅವರು ಮಾತನಾಡಿದರು.
‘ಮಣ್ಣಿನಲ್ಲಿ ಸಾವಯವ ಇಂಗಾಲದ ಪ್ರಮಾಣ ಶೇ 0.5ರಷ್ಟು ಇರಬೇಕು. ಆದರೆ, ಈಗ ಶೇ 0.35ರಷ್ಟಿದೆ. ಇಂತಹ ಮಣ್ಣಿನಲ್ಲಿ ಬೆಳೆದ ಕೃಷಿ ಉತ್ಪನ್ನಗಳಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತವೆ’ ಎಂದು ತಿಳಿಸಿದರು.
‘ಶಿಫಾರಸು ಪ್ರಮಾಣದ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆ ಹಾಗೂ ಸಾಂಪ್ರದಾಯಿಕ ಕೃಷಿಗೆ ಒತ್ತು ನೀಡಿದಾಗ ಮಾತ್ರ ವಿಷಮುಕ್ತ ಆಹಾರ ಉತ್ಪಾದಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಾವಯವ ಹಾಗೂ ನೈಸರ್ಗಿಕ ಕೃಷಿಯನ್ನು ಸಮರ್ಪಕವಾಗಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಸತ್ವಯುತ ಆಹಾರ ಉತ್ಪಾದಿಸಬಹುದು’ ಎಂದರು.
ವಿಸ್ತರಣಾ ನಿರ್ದೇಶಕ ಮಧುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಹೈದರಾಬಾದ್ನ ರಾಷ್ಟ್ರೀಯ ಕೃಷಿ ನಿರ್ವಹಣಾ ಸಂಸ್ಥೆಯ ಮಹದೇವಸ್ವಾಮಿ, ಬೆಂಗಳೂರು ವಿ.ವಿ. ತರಬೇತಿ ಘಟ ಕದ ಮುಖ್ಯಸ್ಥ
ಕೆ. ಶಿವರಾಮು ಪಾಲ್ಗೊಂಡಿದ್ದರು.