ಯಲಹಂಕ: ಭಾರತ್ ಸೇವಾಶ್ರಮ ಸಂಘದ ಸಂಸ್ಥಾಪಕ ಸ್ವಾಮಿ ಪ್ರಣವಾನಂದಜೀ ಮಹಾರಾಜ್ ಅವರ 129ನೇ ಜನ್ಮ ದಿನಾಚರಣೆ ಪ್ರಯುಕ್ತ ಸಂಘದ ಜಕ್ಕೂರು ಶಾಖೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.
ಪ್ರಣವಾನಂದಜೀ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಭಕ್ತರು, ಹೋಮ–ಹವನ, ಭಜನೆ, ಗೀತ ಪ್ರವಚನ ಮತ್ತು ಯಜ್ಞ ಸೇರಿ ವಿವಿಧ ರೀತಿಯ ಪೂಜಾಕೈಂಕರ್ಯಗಳನ್ನು ನೆರವೇರಿಸಿದರು.
ಬಿಬಿಎಂಪಿ ಯಲಹಂಕ ವಲಯದ ಸಹಯೋಗದಲ್ಲಿ 410 ಮಹಿಳಾ ಪೌರಕಾರ್ಮಿಕರಿಗೆ ಸೀರೆ ಹಾಗೂ 210 ಪುರುಷ ಪೌರಕಾರ್ಮಿಕರಿಗೆ ಪ್ಯಾಂಟ್ ಮತ್ತು ಶರ್ಟ್ ವಿತರಿಸಲಾಯಿತು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ವೇಳೆ ಮಾತನಾಡಿದ ಭಾರತ್ ಸೇವಾಶ್ರಮ ಸಂಘದ ಜಕ್ಕೂರು ಶಾಖೆಯ ಮುಖ್ಯಸ್ಥ ಶಿವಪ್ರೇಮಾನಂದ ಸ್ವಾಮೀಜಿ, ‘ಪ್ರಣವಾನಂದಜೀ ಅವರು ಕೆಲವೇ ವರ್ಷಗಳು ಬದುಕಿದ್ದರೂ, ಅವರ ತತ್ವ–ಸಿದ್ಧಾಂತಗಳು ನೂರು ವರ್ಷಗಳನ್ನು ಪೂರೈಸಿ, ಇಂದಿಗೂ ಸಮಾಜಕ್ಕೆ ಆದರ್ಶವಾಗಿವೆ‘ ಎಂದು ಸ್ಮರಿಸಿದರು.
ಸಂಘದ ವತಿಯಿಂದ ಜಕ್ಕೂರು ಮತ್ತು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ನಿತ್ಯ ಅನ್ನದಾನ ನಡೆಯುತ್ತಿದೆ. ಬಡಮಕ್ಕಳ ಶಿಕ್ಷಣಕ್ಕೆ ನೆರವು ಹಾಗೂ ಆರೋಗ್ಯಸೇವೆ ನೀಡಲಾಗುತ್ತಿದೆ. ಅಲ್ಲದೆ ಯೋಗ, ಶಾಸ್ತ್ರೀಯ ಹಾಡುಗಾರಿಕೆ ತರಗತಿಗಳು ನಡೆಯುತ್ತಿವೆ. ಹೆಣ್ಣುಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ ಎಂದು ತಿಳಿಸಿದರು.