ಬೆಂಗಳೂರು: ನಿವೃತ್ತ ಐಪಿಎಸ್ ಅಧಿಕಾರಿ ಎಂ.ಲಕ್ಷ್ಮಣ್ ಅವರು ರಚಿಸಿದ ‘ಕರ್ನಾಟಕ ಕಾರಾಗೃಹಗಳ ಕಾನೂನು’ ಪುಸ್ತಕವನ್ನು ಕಾರಾಗೃಹಗಳ ಇಲಾಖೆಯ ಎಡಿಜಿಪಿ ಎನ್.ಎಸ್.ಮೇಘರಿಕ್ ಅವರು ಇತ್ತೀಚೆಗೆ ಬಿಡುಗಡೆ ಮಾಡಿದರು.
ಜಯನಗರದ ‘ಶಾರದ ವಿಕಾಸ್ ಟ್ರಸ್ಟ್ ಮತ್ತು ವಿಕಾಸ್ ಗ್ಲೋಬಲ್ ಸಲ್ಯೂಷನ್’ ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ‘ಲಾಯರ್ಸ್ ಲಾ ಬುಕ್’ ಪ್ರಕಾಶನದ ಮಾಲೀಕ ಜಿ.ವಿ.ಮೂರ್ತಿ ಅವರು ಈ ಪುಸ್ತಕ ಪ್ರಕಟಿಸಿದ್ದಾರೆ.
ಪುಸ್ತಕದ ಬಗ್ಗೆ ಮಾತನಾಡಿದ ಮೇಘರಿಕ್, ‘ಕಾರಾಗೃಹಗಳ ಅಧಿಕಾರಿಗಳು, ಪೊಲೀಸರು, ಕಾನೂನು ವಿಧ್ಯಾರ್ಥಿಗಳು ಹಾಗೂ ವಕೀಲರಿಗೆ ಈ ಪುಸ್ತಕ ಉಪಯುಕ್ತವಾಗಿದೆ’ ಎಂದು ತಿಳಿಸಿದರು.
ಲೇಖಕ ಲಕ್ಷ್ಮಣ, ‘ಕಾರಾಗೃಹಗಳ ಭೇಟಿ, ಆಗು- ಹೋಗುಗಳು, ಸಲಕರಣೆಗಳು, ಸುಧಾರಣಾ ಕ್ರಮಗಳ ಬಗ್ಗೆ ಅಧ್ಯಯನ ನಡೆಸಿ ಈ ಪುಸ್ತಕ ಬರೆದಿದ್ದೇನೆ. ನ್ಯಾಯಾಲಯ ತೀರ್ಪುಗಳು, ಅಪರಾಧಗಳ ಅಂಕಿ- ಅಂಶ, ಸೈಬರ್ ಅಪರಾಧ ತಡೆಯುವಿಕೆ ಸೇರಿ ದಂತೆ ಹಲವು ವಿಷಯಗಳ ಆಳವಾದ ಮಾಹಿತಿ ಈ ಪುಸ್ತಕದಲ್ಲಿದೆ’ ಎಂದರು.
ನಿವೃತ್ತ ಐಪಿಎಸ್ ಅಧಿಕಾರಿಗಳಾದ ಎಂ.ಕೆ.ಶ್ರೀವಾತ್ಸವ, ವೈ.ಆರ್. ಪಾಟೀಲ, ಎಂ.ಜಿ.ತಾವರಖೇಡ ಹಾಗೂ ಡಿ.ವಿ.ವೆಂಕಟಾಚಲಪತಿ ಕಾರ್ಯಕ್ರಮದಲ್ಲಿದ್ದರು.