ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ತಂದೆಯೊಂದಿಗೆ ಗಲಾಟೆ: ಪುತ್ರನ ಕೊಲೆ

ತಲೆಮರೆಸಿಕೊಂಡ ಆರೋಪಿ ಪತ್ತೆಗೆ ಪುಟ್ಟೇನಹಳ್ಳಿ ಪೊಲೀಸರ ಹುಡುಕಾಟ
Published 6 ಜೂನ್ 2024, 0:03 IST
Last Updated 6 ಜೂನ್ 2024, 0:03 IST
ಅಕ್ಷರ ಗಾತ್ರ

ಬೆಂಗಳೂರು: ಪುಟ್ಟೇನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಜರಗನಹಳ್ಳಿಯ ಮನೆಯೊಂದರಲ್ಲಿ ನಡೆದ ಗಲಾಟೆ ವೇಳೆ ಐ.ಟಿ ಕಂಪನಿ ಉದ್ಯೋಗಿ ಯಶವಂತ್‌ (23) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

‘ಕೌಟುಂಬಿಕ ವಿಚಾರಕ್ಕೆ ಮನೆಯಲ್ಲಿ ತಂದೆ ಹಾಗೂ ತಾಯಿ ನಡುವೆ ನಿತ್ಯ ಗಲಾಟೆ ನಡೆಯುತ್ತಿತ್ತು. ಮಂಗಳವಾರ ರಾತ್ರಿಯೂ ತಂದೆ ಬಸವರಾಜ್‌ (53) ಹಾಗೂ ತಾಯಿ ಭಾಗ್ಯಲಕ್ಷ್ಮಿ ಮಧ್ಯೆ ಜಗಳ ಆಗುತ್ತಿದ್ದ ವೇಳೆ ಯಶವಂತ್‌ ಮಧ್ಯ ಪ್ರವೇಶಿಸಿ ತಂದೆಗೆ ಬುದ್ಧಿಮಾತು ಹೇಳಿದ್ದರು. ನಾನು ಉದ್ಯೋಗ ಮಾಡಿಕೊಂಡು ಮನೆಗೆ ಬೇಕಾದ ಅಗತ್ಯ ಸಾಮಗ್ರಿ ತಂದು ಹಾಕುತ್ತಿದ್ದೇನೆ. ಕುಟುಂಬದ ಉದ್ದಾರಕ್ಕೆ ಶ್ರಮ ಹಾಕುತ್ತಿದ್ದೇನೆ. ಈ ರೀತಿ ಜಗಳದಿಂದ ಕಿರಿಕಿರಿ ಉಂಟಾಗುತ್ತಿದೆ ಎಂದು ಯಶವಂತ್‌ ಅವರು ತಂದೆಗೆ ಹೇಳಿದ್ದರು. ಆದರೂ ಕೇಳದೆ ಜಗಳ ಮುಂದುವರಿಸಿದ್ದರು. ಗಲಾಟೆ ವಿಕೋಪಕ್ಕೆ ತಿರುಗಿ, ಬಸವರಾಜ್‌ ಅವರು ಚಾಕುವಿನಿಂದ ಇರಿದಿದ್ದಾರೆ. ಬಲವಾದ ಪೆಟ್ಟು ಬಿದ್ದಿದ್ದರಿಂದ ಯಶವಂತ್‌ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ’ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

‘ಬಸವರಾಜ್‌ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ನಿತ್ಯ ಮದ್ಯ ಸೇವಿಸುವ ಅಭ್ಯಾಸವಿತ್ತು. ಭಾಗ್ಯಲಕ್ಷ್ಮಿ ಅವರು ಪತಿಯ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಬಸವರಾಜ್‌ ಅವರು ತಲೆಮರೆಸಿಕೊಂಡಿದ್ದಾರೆ. ಹುಡುಕಾಟ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT