ಬೆಂಗಳೂರು: ರೈಲು ಹಾಗೂ ಬಸ್ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಸಂಚರಿಸಿ ಕಳ್ಳತನ ಮಾಡುತ್ತಿದ್ದ ಆರೋಪದಡಿ ಇಬ್ಬರು ಮಹಿಳೆಯರನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಪ್ಪಂನ ಗಾಯತ್ರಿ ಅಲಿಯಾಸ್ ರೂಪಾ (38) ಮತ್ತು ತಮಿಳುನಾಡಿನ ಸಂಧ್ಯಾ ಅಲಿಯಾಸ್ ಶರಣ್ಯಾ (25) ಬಂಧಿತರು. ಇವರಿಬ್ಬರು, ಕಳ್ಳತನ ಪ್ರಕರಣದಲ್ಲಿ ಪದೇ ಪದೇ ಭಾಗಿಯಾಗುವ ಕುಪ್ಪಂ ತಂಡದ ಸದಸ್ಯರು. ಇವರಿಂದ 402 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಲಾಗಿದೆ’ ಎಂದು ರೈಲ್ವೆ ಎಸ್ಪಿ ಎಸ್.ಕೆ. ಸೌಮ್ಯಲತಾ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಮುರುಡೇಶ್ವರದಿಂದ ಬೆಂಗಳೂರಿಗೆ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್ನಲ್ಲಿದ್ದ ಚಿನ್ನಾಭರಣ ಕಳ್ಳತನ ಆಗಿತ್ತು. ಈ ಬಗ್ಗೆ ದಾಖಲಾದ ಪ್ರಕರಣದ ತನಿಖೆ ಕೈಗೊಂಡು, ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.
‘ಜನರು ಹೆಚ್ಚು ಓಡಾಡುವ ರಜಾ ದಿನಗಳಂದು ಆರೋಪಿಗಳು, ಮಗುವನ್ನು ಎತ್ತಿಕೊಂಡು ರೈಲು ಹಾಗೂ ಬಸ್ಗಳಲ್ಲಿ ಸಂಚರಿಸುತ್ತಿದ್ದರು. ಕೆಲವು ಬಾರಿ ಟಿಕೆಟ್ ಕಾಯ್ದಿರಿಸುತ್ತಿದ್ದರು. ಹಲವು ಬಾರಿ, ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು.’
‘ಚಿನ್ನಾಭರಣ ಇರುತ್ತಿದ್ದ ಮಹಿಳೆಯರನ್ನು ಗುರುತಿಸುತ್ತಿದ್ದ ಆರೋಪಿಗಳು, ಅವರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದರು. ನಿಲ್ದಾಣ ಬರುತ್ತಿದ್ದಂತೆ ರೈಲಿನಿಂದ ಇಳಿದು ಪರಾರಿಯಾಗುತ್ತಿದ್ದರು’ ಎಂದರು.
‘ಬೇಸಿಗೆ ಸಂದರ್ಭದಲ್ಲಿ ಹೆಚ್ಚಾಗಿ ಕಳ್ಳತನ ಮಾಡುತ್ತಿದ್ದ ಆರೋಪಿಗಳು, ನಂತರ ಏಳು ತಿಂಗಳು ತಮ್ಮೂರಿಗೆ ಹೋಗುತ್ತಿದ್ದರು. ಬಳಿಕ ಪುನಃ ನಗರಕ್ಕೆ ಬಂದು ಕಳ್ಳತನ ಮಾಡುತ್ತಿದ್ದರು. ರೈಲು ಮಾತ್ರವಲ್ಲದೇ ಬಸ್ಗಳಲ್ಲಿಯೂ ಆರೋಪಿಗಳು ಕಳ್ಳತನ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಸೌಮ್ಯಲತಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.