ಬೆಂಗಳೂರು: ನಗರದಲ್ಲಿ ಗುರುವಾರ ಸಂಜೆ ಮತ್ತೆ ಮಳೆ ಸುರಿಯಿತು. ಮತದಾನ ಮಾಡಿ ಮನೆಗೆ ತೆರಳುತ್ತಿದ್ದ ಜನ ಮಳೆಯಲ್ಲಿ ಸಿಲುಕಿ ತೊಂದರೆ ಅನುಭವಿಸಿದರು.
ಬಾಣಸವಾಡಿ, ಕುಶಾಲ್ ನಗರ, ಹಲಸೂರು, ಶಾಂತಿನಗರ, ವಿಲ್ಸನ್ ಗಾರ್ಡನ್, ಮೆಜೆಸ್ಟಿಕ್, ಜಯ ಮಹಲ್,ಆನೇಕಲ್ ತಾಲ್ಲೂಕಿನ ಹುಣಸವಾಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಮಳೆ ಹನಿಯಿತು. ಗುಡುಗು ಮಿಂಚಿನ ಆರ್ಭಟವೂ ಜೋರಾಗಿತ್ತು.
ಗಾಳಿ ಮಳೆಯ ಹೊಡೆತಕ್ಕೆ ನಗರದ ರಾಜಾಜಿನಗರ, ಸಂಪಿಗೆ ರಸ್ತೆ, ಪೀಣ್ಯ, ಬೊಮ್ಮನಹಳ್ಳಿ, ಪರಪ್ಪನ ಅಗ್ರಹಾರ ಹಾಗೂ ಜಯನಗರದ ಬಳಿ ಮರಗಳು ಮುರಿದು ಬಿದ್ದವು.
ಚುನಾವಣಾ ಕರ್ತವ್ಯಕ್ಕೆ ನಿಯುಕ್ತಿಗೊಂಡ ಸಿಬ್ಬಂದಿ ಮತಪೆಟ್ಟಿಗೆಗಳನ್ನು ಮತ ಕೇಂದ್ರಗಳಿಂದಹೊರತರಲು ಹರಸಾಹಸಪಟ್ಟರು.ಚುನಾವಣೆಯ ಕಾರಣಕ್ಕೆ ವಾಹನಗಳ ಓಡಾಟ ವಿಲ್ಲದೇಬೆಳಿಗ್ಗೆಯಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳು ಮಳೆ ಶುರುವಾಗುತ್ತಿದ್ದಂತೆ ದಟ್ಟಣೆಗೆ ಸಾಕ್ಷಿಯಾದವು.
ಮೆಟ್ರೊ ಹಾಗೂ ಬಿಬಿಎಂಪಿ ಕಾಮಗಾರಿ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ದಟ್ಟಣೆ ಉಂಟಾಗಿಹನುಮನ ಬಾಲದಂತೆ ವಾಹನಗಳು ಉದ್ದಕ್ಕೂ ನಿಂತಿದ್ದ, ದೃಶ್ಯ ಕಂಡುಬಂತು. ಧಾವಂತದಲ್ಲಿದ್ದ ಸವಾರರು ಕಿವಿಗಡಚಿಕ್ಕು ಹಾರ್ನ್ ಸದ್ದು ಮಾಡಿದರು.ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರಿದರು.
ನಗರದಲ್ಲಿ ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.