ಪೀಣ್ಯ ದಾಸರಹಳ್ಳಿ: ಗುಂಡಿಗಳಿಂದ ಕೂಡಿದ್ದ, ದೂಳುಮಯವಾಗಿದ್ದ ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಅಂದಾನಪ್ಪ ಲೇಔಟ್ ರಸ್ತೆಯನ್ನು ದುರಸ್ತಿಗೊಳಿಸಿ ಕಾಂಕ್ರಿಟ್ ಹಾಕಿಸಿ ಅಭಿವೃದ್ಧಿಪಡಿಸಲಾಗಿದೆ.
ಅಂದಾನಪ್ಪ ಲೇಔಟ್ನ ಗಣಪತಿನಗರದ ರಸ್ತೆಯಿಂದ ತಮ್ಮೇನಹಳ್ಳಿ ಕಡೆಗೆ ಹೋಗುವ ಈ ರಸ್ತೆ ತುಂಬಾ ಗುಂಡಿಗಳಿದ್ದವು. ದೂಳುಮಯವಾಗಿತ್ತು. ವಾಹನಗಳು ಸಂಚರಿಸಿದಾಗ ಉಂಟಾಗುವ ದೂಳಿನಿಂದ ಜನರು ರಸ್ತೆಯಲ್ಲಿ ಓಡಾಡಲು ಹರಸಾಹಸಪಡುತ್ತಿದ್ದರು. ರಸ್ತೆ ಅವ್ಯವಸ್ಥೆಯ ಕುರಿತು ‘ಪ್ರಜಾವಾಣಿ’ ಫೆ.9ರ ಸಂಚಿಕೆಯಲ್ಲಿ ‘ಡಾಂಬರು ಕಾಣದ ಅಂದಾನಪ್ಪ ಲೇಔಟ್ ರಸ್ತೆ’ ಎಂಬ ಶೀರ್ಷಿಕೆಯಡಿ ಸುದ್ದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು, ರಸ್ತೆಗೆ ಕಾಂಕ್ರೀಟ್ ಹಾಕಿಸಿ ಅಭಿವೃದ್ಧಿಪಡಿಸಿದ್ದಾರೆ.
‘ಈ ರಸ್ತೆಯ ಸಮಸ್ಯೆ ಬಗ್ಗೆ ದೂರುಗಳು ಬಂದಿದ್ದವು. ಅನುದಾನದ ಕೊರತೆಯಿಂದಾಗಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗಿವೆ. ಆದರೂ ಜನರ ಹಿತ ದೃಷ್ಟಿಯಿಂದ ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ' ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು. 'ರಸ್ತೆಗೆ ಕಾಂಕ್ರೀಟ್ ಹಾಕಿಸಲಾಗಿದೆ. ಗುಣಮಟ್ಟದ ರಸ್ತೆಯಾಗಿದೆ' ಎಂದು ಚಿಕ್ಕಬಾಣಾವರ ಪುರಸಭೆ ಮುಖ್ಯ ಅಧಿಕಾರಿ ಎಚ್.ಎ. ಕುಮಾರ್ ತಿಳಿಸಿದರು.
ಸ್ಥಳೀಯ ನಿವಾಸಿ ಬಿ.ಎಂ.ಚಿಕ್ಕಣ್ಣ ‘ಸುಮಾರು ವರ್ಷಗಳಿಂದ ರಸ್ತೆ ದುರಸ್ತಿಪಡಿಸುವಂತೆ ಪುರಸಭೆಗೆ ಮನವಿ ಮಾಡಿದ್ದೆವು. ಈಗ ಅದಕ್ಕೆ ಫಲ ಸಿಕ್ಕಿದೆ. ಮನವಿಗೆ ಸ್ಪಂದಿಸಿದ ಶಾಸಕರಿಗೂ, ಅಧಿಕಾರಿಗಳಿಗೂ ಧನ್ಯವಾದಗಳು' ಎಂದರು.
ಹೀಗಿತ್ತು ಅಂದಾನಪ್ಪ ಲೇಔಟ್ ರಸ್ತೆ
ಅಂದಾನಪ್ಪ ಲೇಔಟ್ ರಸ್ತೆ ಈಗ ಕಾಂಕ್ರೀಟ್ ರಸ್ತೆಯಾಗಿ ಅಭಿವೃದ್ಧಿಗೊಂಡಿರುವುದು
ಸುಮಾರು ವರ್ಷಗಳಿಂದ ಧೂಳಿನಿಂದ ಕೂಡಿದ್ದ ಅಂದಾನಪ್ಪ ಲೇಔಟ್ ರಸ್ತೆ ಈಗ ಕಾಂಕ್ರೀಟ್ ರಸ್ತೆಯಾಗಿದೆ: