ಬೆಂಗಳೂರು: ಬಸ್ ಹಾಗೂ ಲಾರಿ ಚಾಲಕ– ನಿರ್ವಾಹಕರಿಗೆ ಮಾರಕಾಸ್ತ್ರಗಳಿಂದ ಹೊಡೆದು ಸುಲಿಗೆ ಮಾಡಿದ್ದ ಆರೋಪಿ ವಿಕ್ರಂ ಅಲಿಯಾಸ್ ಸೈತಾನ್ (21) ಎಂಬುವರನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ.
‘ಮೂಡಲಪಾಳ್ಯದ ವಿಕ್ರಂ, ಅಪರಾಧ ಹಿನ್ನೆಲೆಯುಳ್ಳವ. ಪ್ರಕರಣದ ಪ್ರಮುಖ ಆರೋಪಿ ವಿನಾಯಕ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಸದ್ಯ ಬಂಧಿತನಿಂದ ₹ 2.35 ಲಕ್ಷ ಮೌಲ್ಯದ 3 ಮೊಬೈಲ್ಗಳು ಹಾಗೂ 5 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಹೊರವರ್ತುಲ ರಸ್ತೆಯ ಸುಮನಹಳ್ಳಿ ಜಂಕ್ಷನ್ನ ಸರ್ವೀಸ್ ರಸ್ತೆಯಲ್ಲಿ ಬಸ್ ಹಾಗೂ ಲಾರಿಗಳನ್ನು ನಿಲ್ಲಿಸಲಾಗಿತ್ತು. ಚಾಲಕರು ಹಾಗೂ ನಿರ್ವಾಹಕರು ವಾಹನದಲ್ಲಿ ಮಲಗಿದ್ದರು. ನ. 10ರಂದು ನಸುಕಿನಲ್ಲಿ ಸ್ಥಳಕ್ಕೆ ಬಂದಿದ್ದ ಆರೋಪಿಗಳು, ಬಸ್ ಹಾಗೂ ಲಾರಿ ಗಾಜುಗಳನ್ನು ಒಡೆದಿದ್ದರು. ಶಬ್ದ ಕೇಳಿ ಎಚ್ಚರಗೊಂಡಿದ್ದ ಚಾಲಕ–ನಿರ್ವಾಹಕರಿಗೆ ಮಾರಕಾಸ್ತ್ರದಿಂದ ಹೊಡೆದಿದ್ದರು.’
‘ಕೊಲೆ ಬೆದರಿಕೆಯೊಡ್ಡಿದ್ದ ಆರೋಪಿಗಳು, ಚಾಲಕ–ನಿರ್ವಾಹಕರ ಮೊಬೈಲ್ಗಳು ಹಾಗೂ ಅವರ ಬಳಿಯ ಹಣ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ದಾಖಲಾದ ಪ್ರಕರಣದ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದರು.
‘ಕಾಮಾಕ್ಷಿಪಾಳ್ಯ, ಆರ್ಎಂಸಿ ಯಾರ್ಡ್, ಮಾಗಡಿ ರಸ್ತೆ, ರಾಜಗೋಪಾಲನಗರ, ಬಾಗಲಗುಂಟೆ, ಬ್ಯಾಟರಾಯನಪುರ ಹಾಗೂ ನಂದಿನಿ ಲೇಔಟ್ ಠಾಣೆ ವ್ಯಾಪ್ತಿಯಲ್ಲೂ ಆರೋಪಿಗಳು ಸುಲಿಗೆ ಮಾಡಿರುವುದು ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.