ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಿಳೆಯರಲ್ಲಿ ಅರಿವಿನ ಬೀಜ ಬಿತ್ತಿದ ಸಾವಿತ್ರಿಬಾಯಿ ಪುಲೆ: ಚಿಂತಕಿ ಲೀಲಾ ಸಂಪಿಗೆ

ಸಾವಿತ್ರಿಬಾಯಿ ಪುಲೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಚಿಂತಕಿ ಲೀಲಾ ಸಂಪಿಗೆ
Published 3 ಜನವರಿ 2024, 16:19 IST
Last Updated 3 ಜನವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ಮನುಸ್ಮೃತಿ ಆಧಾರಿತ ಸಮಾಜ ಉತ್ತುಂಗದಲ್ಲಿದ್ದ ಕಾಲದಲ್ಲಿ ಮಹಿಳೆಯರ ಎದೆಯಲ್ಲಿ ಅಕ್ಷರ ಬೀಜ ಬಿತ್ತಿ ಅರಿವಿನ ಬೆಳೆ ಬೆಳೆದವರು ಸಾವಿತ್ರಿಬಾಯಿ ಪುಲೆ ಅವರು ಎಂದು ಚಿಂತಕಿ ಲೀಲಾ ಸಂಪಿಗೆ ಹೇಳಿದರು.

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಪುಲೆ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಾಲ್ಯವಿವಾಹ, ಸತಿ ಪದ್ಧತಿ, ಅಸ್ಪೃಶ್ಯರು ಉಗುಳಲು ಗೆರಟೆ, ಹೆಜ್ಜೆ ಅಳಿಸಿ ಹಾಕಲು ಪೊರಕೆ ಕಟ್ಟಿಕೊಂಡು ಮಧ್ಯಾಹ್ನ ಮಾತ್ರ ಬರಬೇಕಿದ್ದ, ಶ್ರೇಣೀಕೃತ ವ್ಯವಸ್ಥೆಯಲ್ಲಿ ಕೆಳ ಜಾತಿಯ ಹೆಣ್ಣುಮಕ್ಕಳು ಎದೆಗೆ ಬಟ್ಟೆ ಹಾಕಿಕೊಳ್ಳಲೂ ಸ್ತನತೆರಿಗೆ ಕಟ್ಟಬೇಕಾಗಿದ್ದ ಕಾಲ ಘಟ್ಟದಲ್ಲಿ ಬೆಳಕಾಗಿ ಬಂದವರು ಸಾವಿತ್ರಿ ಬಾಯಿ. ಅವರಿಗೆ ಸರಿಯಾದ ಸಾಂಗತ್ಯ ನೀಡಿದವರು ಜ್ಯೋತಿ ಬಾಪುಲೆ ಎಂದು ವಿವರಿಸಿದರು.

ಈಗ ಶೇ 63ರಷ್ಟು ಹೆಣ್ಣುಮಕ್ಕಳು ವಿದ್ಯಾಭ್ಯಾಸ ಹೊಂದಿದ್ದಾರೆ. ಆದರೆ, ಅತ್ಯಾಚಾರ, ಶೋಷಣೆ, ಹೆಣ್ಣುಭ್ರೂಣಹತ್ಯೆ ಅವ್ಯಾಹತವಾಗಿ ಮುಂದುವರಿದಿದೆ. ಲಿಂಗಾನುಪಾತದ ಅಸಮಾನತೆ ಹೆಚ್ಚಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದಿಂದ ಇಂದು ಕೆಲವು ಹಕ್ಕುಗಳು ಮಹಿಳೆಯರಿಗೆ, ದಲಿತರಿಗೆ ಸಿಕ್ಕಿದೆ. ಈ ಸಂವಿಧಾನವನ್ನೇ ಬದಲಾಯಿಸಿ ಮತ್ತೆ ಮನುಸ್ಮೃತಿ ಆಡಳಿತವನ್ನು ತರಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಅಧ್ಯಕ್ಷ ಡಿ. ಶಿವಶಂಕರ್‌ ಅಧ್ಯಕ್ಷತೆ ವಹಿಸಿದ್ದರು. ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಜಾವೇದ ನಸೀಮ ಖಾನಂ, ಬಿಬಿಎಂಪಿ ಜಂಟಿ ಆಯುಕ್ತೆ ಲಕ್ಷ್ಮೀದೇವಿ, ಸಿದ್ದಲಿಂಗಯ್ಯ ಸ್ಮಾರಕ ಪ್ರತಿಷ್ಠಾನದ ಅಧ್ಯಕ್ಷೆ ಮಾನಸ ಸಿದ್ಧಲಿಂಗಯ್ಯ ಭಾಗವಹಿಸಿದ್ದರು. 

ಬಿಬಿಎಂಪಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಮೆಹನಾಜ್ ಎಂ.ಇ., ಅತಿಥಿ ಉಪನ್ಯಾಸಕರ ಸಂಘಟನೆಯ ಹೋರಾಟಗಾರ್ತಿ ಹೇಮಲತಾ, ವಾಣಿವಿಲಾಸ ಆಸ್ಪತ್ರೆಯ ಶೂಶ್ರೂಷಕ ಅಧೀಕ್ಷಕಿ ಎನ್‌. ಸುಮಿತ್ರಾದೇವಿ, ಕರ್ನಾಟಕ ಸಚಿವಾಲಯದ ಆಂತರಿಕ ಲೆಕ್ಕ ಪರಿಶೋಧಕಿ ಅಮೃತಾ, ಬಿಬಿಎಂಪಿ ಬಾಲಕಿಯರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಮಹೇಶ್‌ ಕುಮಾರ್‌, ಲೇಖಕ ಕೆ. ಮಹೇಶ್‌ಕುಮಾರ್‌ ಅವರನ್ನು ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT