ಪೀಣ್ಯ ದಾಸರಹಳ್ಳಿ: ಬಾಗಲಗುಂಟೆಯ ಎಂ.ಇ.ಐ. ಆಟದ ಮೈದಾನದಲ್ಲಿ ಶ್ರೀವಾರಿ ಫೌಂಡೇಶನ್ ಸಹಯೋಗದೊಂದಿಗೆ ಫೆ.17ರಂದು ಮಧ್ಯಾಹ್ನ 3.30ರಿಂದ ಲೋಕ ಕಲ್ಯಾಣಕ್ಕಾಗಿ ಶ್ರೀನಿವಾಸ ಕಲ್ಯಾಣೋತ್ಸವ ಹಮ್ಮಿಕೊಳ್ಳಲಾಗಿದೆ.
‘ತಿರುಪತಿ ದೇವಸ್ಥಾನದಿಂದ ಉತ್ಸವಮೂರ್ತಿ ಹಾಗೂ ಲಡ್ಡು ಪ್ರಸಾದವನ್ನು ತರಲಾಗುತ್ತಿದೆ. ಅರ್ಚಕರು ಸಹ ಅಲ್ಲಿಂದಲೇ ಬರಲಿದ್ದಾರೆ’ ಎಂದು ಶಾಸಕ ಮುನಿರಾಜು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಶ್ರೀದೇವಿ ಭೂದೇವಿ ಸಹಿತನಾದ ಶ್ರೀನಿವಾಸ ದೇವರನ್ನು ಮೆರವಣಿಗೆಯ ಮೂಲಕ ಕಲ್ಯಾಣೋತ್ಸವ ಮಂಟಪಕ್ಕೆ ಕರೆತರಲಾಗುವುದು. ತಿರುಪತಿ ದೇವಸ್ಥಾನದ ಗರ್ಭಗುಡಿಯಲ್ಲಿರುವ ಮಾದರಿಯಲ್ಲೇ ವೇದಿಕೆ ನಿರ್ಮಿಸಿ ತಿರುಪತಿ ತಿಮ್ಮಪ್ಪನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ದಾಸರಹಳ್ಳಿ ಕ್ಷೇತ್ರದ ಭಕ್ತರು ಭಾಗವಹಿಸಬೇಕು’ ಎಂದು ಮನವಿ ಮಾಡಿದರು.