ಬೆಂಗಳೂರು: ‘ಪಿಎಂ ಸೂರ್ಯ ಘರ್’ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರೆತಿದ್ದು, 10 ಸಾವಿರ ಅರ್ಜಿಗಳು ಬಂದಿವೆ’ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದರು.
‘ಪಿಎಂ ಸೂರ್ಯ್ ಘರ್’ ಯೋಜನೆ ಪ್ರಚಾರಕ್ಕಾಗಿ ನಗರದಲ್ಲಿ ಶನಿವಾರ ‘ಸೂರ್ಯ ರಥ ಯಾತ್ರೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರದ pmsuryaghar.gov.in ವೆಬ್ಸೈಟ್ನಲ್ಲಿ ‘ರೂಫ್ ಟಾಪ್ ಸೋಲಾರ್’ ವ್ಯವಸ್ಥೆಗೆ ಗೃಹ ಬಳಕೆದಾರರು ಅರ್ಜಿ ಸಲ್ಲಿಸಬಹುದು. ಯೋಜನೆ ಅನುಷ್ಠಾನಕ್ಕೆ ರಾಜ್ಯದಲ್ಲಿ 229 ಖಾಸಗಿ ಪೂರೈಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
ಕೇಂದ್ರ ಸರ್ಕಾರದ ಎಂಎನ್ಆರ್ಇ ಜಂಟಿ ಕಾರ್ಯದರ್ಶಿ ದಿನೇಶ್ ಜಗದಾಳೆ ಮಾತನಾಡಿ, ‘ಮನೆಯ ಚಾವಣಿ ಸೋಲಾರ್ ವ್ಯವಸ್ಥೆಯನ್ನು ಗ್ರಿಡ್ ಜೊತೆಗೆ ಸಂಪರ್ಕಿಸಿದರೆ 25 ವರ್ಷ ವಿದ್ಯುತ್ ಬಿಲ್ ಪಾವತಿಸಬೇಕಿಲ್ಲ. ಚಾವಣಿಗೆ ಸೋಲಾರ್ ವ್ಯವಸ್ಥೆ ಅಳವಡಿಸುವುದ ರಿಂದ ಹೆಚ್ಚುವರಿ ಜಾಗದ ಅಗತ್ಯವಿಲ್ಲ. ನಿರ್ವಹಣೆ ವೆಚ್ಚ ತೀರಾ ಕಡಿಮೆ’ ಎಂದು ತಿಳಿಸಿದರು.
ಕ್ರೆಡಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ರುದ್ರಪ್ಪಯ್ಯ, ಬೆಸ್ಕಾಂ ನಿರ್ದೇಶಕ (ಹಣಕಾಸು) ದರ್ಶನ್ ಜೆ. ಇದ್ದರು.
ವಿವಿಧ ಸೋಲಾರ್ ಕಂಪನಿಗಳ ಪ್ರತಿನಿಧಿಗಳೊಂದಿಗೆ ‘ಪಿಎಂ ಸೂರ್ಯ ಘರ್’ ಯೋಜನೆಯ ಅನುಷ್ಠಾನ ಮತ್ತು ಅದರಲ್ಲಿಯ ತೊಡಕುಗಳ ಬಗ್ಗೆ ಅಧಿಕಾರಿಗಳು ಕಾರ್ಯಾಗಾರ ನಡೆಸಿ ಚರ್ಚಿಸಿದರು.