ಕೆ.ಆರ್.ಪುರ: ಒತ್ತಡದ ಬದುಕು ಜನರನ್ನು ಮಾನಸಿಕ ಅಸ್ವಸ್ಥರನ್ನಾಗಿ ಮಾಡುತ್ತಿದೆ. ಶಿಸ್ತು, ಸಂಯಮದಿಂದ ಜೀವನ ಸಾಗಿಸುವುದೇ ಇದಕ್ಕೆ ಪರಿಹಾರ ಎಂದು ವೈದ್ಯ ಡಾ. ಆಂಜನಪ್ಪ ತಿಳಿಸಿದರು.
ಕೆ.ಆರ್. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಪ್ತ ಸಲಹಾ ಸಮಿತಿ ಏರ್ಪಡಿಸಿದ್ದ ‘ವಿದ್ಯಾರ್ಥಿಗಳಲ್ಲಿ ಮಾನಸಿಕ ಆರೋಗ್ಯ ಅರಿವು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ಯುವಜನರು, ಅದರಲ್ಲೂ ಕಾಲೇಜು ವಿದ್ಯಾರ್ಥಿಗಳು ಮನೋರೋಗಕ್ಕೆ ಒಳಗಾಗುತ್ತಿದ್ದಾರೆ. ಯೋಗ, ಧ್ಯಾನ, ಪ್ರಾಣಾಯಾಮ ರೂಢಿಸಿಕೊಂಡು ದೈಹಿಕ ಆರೋಗ್ಯದ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲೆ ಪ್ರತಿಭಾ ಪಾರ್ಶ್ವನಾಥ್ ಮಾತನಾಡಿ, ‘ಹದಿಹರೆಯದವರಲ್ಲಿ ಮಾನಸಿಕ ಸಮಸ್ಯೆ ಉಂಟಾಗಲು ಮಿತಿ ಮೀರಿದ ಆಸೆ– ಆಕಾಂಕ್ಷೆಗಳು, ಮುಂದಾಲೋಚನೆ ಇಲ್ಲದ ನಿರ್ಧಾರ ಹಾಗೂ ವಾಸ್ತವಿಕತೆಯಿಂದ ಭಿನ್ನವಾಗಿ ಯೋಚಿಸುವುದು ಪ್ರಮುಖ ಕಾರಣ’ ಎಂದು ಹೇಳಿದರು.
ಐಕ್ಯುಸಿ ಸಂಚಾಲಕಿ ರೇಣುಕಾ ಬಿ. ಜಾನಬೋ, ಆಪ್ತಸಲಹಾ ಸಮಿತಿ ಸಂಚಾಲಕರಾದ ಆಲಿಸ್ ಚೆರಿಯನ್, ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಹರ್ಷಕುಮಾರ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎನ್ಎಸ್ಎಸ್ ಸಂಯೋಜಕ ವಿಜಯಕುಮಾರ್, ಸಣ್ಣಚಿಕ್ಕಯ್ಯ ಭಾಗವಹಿಸಿದ್ದರು.