ಬೆಂಗಳೂರು: ‘ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಎಂಬ ಬೇಧವಿಲ್ಲದೆ ಎಲ್ಲ ಶಾಲೆಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ನಾಡಗೀತೆ ಗಾಯನದ ಆದೇಶವನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ಆಗ್ರಹಿಸಿದ್ದಾರೆ.
ನಾಡಗೀತೆ ಧಾಟಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿರುವ ಅವರು, ‘ಕನ್ನಡ ನೆಲದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲೂ ನಾಡಗೀತೆಯನ್ನು ಹಾಡುವಂತಾಗಬೇಕು. ನಾಡಗೀತೆಯು ಕನ್ನಡ ಸಂಸ್ಕೃತಿಯ ಅಸ್ಮಿತೆಯನ್ನು ಉಳಿಸುವ ಪ್ರಮುಖ ಹೆಜ್ಜೆಯಾಗಬೇಕು. ಈ ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ತು ಕೂಡ ರಚನಾತ್ಮಕ ಪಾತ್ರ ವಹಿಸಲಿದೆ. ನಾಡಗೀತೆಯ ಮಹತ್ವ ತಿಳಿಸುವ ಇನ್ನಷ್ಟು ಪ್ರಯತ್ನಗಳು ಸಾಧ್ಯವಾಗಬೇಕು’ ಎಂದು ಹೇಳಿದ್ದಾರೆ.
‘ನಾಡು-ನುಡಿಗೆ ಸಂಬಂಧಪಟ್ಟ ವಿಚಾರಗಳು ನ್ಯಾಯಾಲಯ ತಲುಪಬಾರದು. ಇದರಿಂದ ಕನ್ನಡಿಗರಲ್ಲಿ ಒಗ್ಗಟ್ಟಿಲ್ಲ ಎನ್ನುವ ತಪ್ಪು ಸಂದೇಶ ಹೋಗಲಿದೆ. ಈ ಕುರಿತು ಬರಹಗಾರರು, ಗಾಯಕರು, ಸಂಗೀತ ಸಂಯೋಜಕರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು’ ಎಂದು ತಿಳಿಸಿದ್ದಾರೆ.
‘ನಾಡಗೀತೆ ಮತ್ತು ನಾಡ ಧ್ವಜಗಳು ಕನ್ನಡಿಗರ ಪಾಲಿಗೆ ಕೇವಲ ಭಾವನಾತ್ಮಕ ಸಂಗತಿಗಳಲ್ಲ, ಅವು ಕನ್ನಡದ ಅಸ್ಮಿತೆ’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.