ಬೆಂಗಳೂರು: ‘ಬೆಂಗಳೂರು ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ 73 ವಿದ್ಯಾರ್ಥಿಗಳನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲಾಗಿದೆ’ ಎಂದು ಆರೋಪಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರು ವಿಶ್ವವಿದ್ಯಾಲಯದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.
‘ಮೊದಲ ಸೆಮಿಸ್ಟರ್ನಲ್ಲಿ 29, ಎರಡನೇ ಸೆಮಿಸ್ಟರ್ನಲ್ಲಿ 35 ಹಾಗೂ ನಾಲ್ಕನೇ ಸೆಮಿಸ್ಟರ್ನಲ್ಲಿ 9 ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲಾಗಿದೆ. ನೊಂದಿರುವ ವಿದ್ಯಾರ್ಥಿಗಳು, ಮುಂದಿನ ಭವಿಷ್ಯ ಹೇಗೆ ಎಂದು ಚಿಂತಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
‘ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದ್ದಾರೆ. ಒಂದು ವಿಷಯಕ್ಕೆ ₹ 1,500 ಶುಲ್ಕ ತುಂಬಬೇಕಾಗಿದೆ. ಬಡವರು ಹೇಗೆ ಶುಲ್ಕ ತುಂಬಲು ಸಾಧ್ಯ’ ಎಂದು ಪ್ರಶ್ನಿಸಿದರು.
‘ವಿಭಾಗದ ಮುಖ್ಯಸ್ಥರು ಹಾಗೂ ಕೆಲ ಪ್ರಾಧ್ಯಾಪಕರು, ವಿದ್ಯಾರ್ಥಿಗಳ ಭವಿಷ್ಯದ ಜೊತೆ ಆಟವಾಡುತ್ತಿದ್ದಾರೆ’ ಎಂದು ದೂರಿದರು.