ನೆಲಮಂಗಲ: ‘ಬಿಜೆಪಿ ಅಭ್ಯರ್ಥಿ ಡಾ.ಕೆ. ಸುಧಾಕರ್ ಅವರ ದರ್ಪ, ದಬ್ಬಾಳಿಕೆಯ ಪ್ರತಿಫಲವಾಗಿ ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ತಿರಸ್ಕರಿಸಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಲಕ್ಷಾಂತರ ಜನರ ಕಣ್ಣಲ್ಲಿ ನೀರು ಹಾಕಿಸಿದ್ದರಿಂದ ಇಂದು ಅವರು ಅಳುವ ಪರಿಸ್ಥಿತಿ ಬಂದಿದೆ’ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಟೀಕಿಸಿದರು.
ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ‘ದಬ್ಬಾಳಿಕೆಯನ್ನು ಶಾಶ್ವತವಾಗಿ ಅಂತ್ಯ ಮಾಡಲು ಕಾಂಗ್ರೆಸ್ಗೆ ಮತ ನೀಡುವ ಮೂಲಕ ನನ್ನನ್ನು ಲೋಕಸಭೆಗೆ ಕಳುಹಿಸಿಕೊಡಿ’ ಎಂದು ಮನವಿ ಮಾಡಿದರು.
ಶಾಸಕ ಎನ್. ಶ್ರೀನಿವಾಸ್ ಮಾತನಾಡಿ, ‘ರಕ್ಷಾ ರಾಮಯ್ಯ ಅವರನ್ನು ಲೋಕಸಭೆಗೆ ಆರಿಸಿ ಕಳುಹಿಸಿದರೆ ನಿಮ್ಮ ಮನೆ ಬಾಗಿಲಿಗೆ ಅವರನ್ನು ಕರೆತಂದು ಕೆಲಸ ಮಾಡಿಸಿಕೊಡುವ ಜವಾಬ್ದಾರಿ ನನ್ನದು’ ಎಂದರು.
ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ‘ಅತ್ಯಂತ ಭ್ರಷ್ಟ ಸುಧಾಕರ್ ಅವರು ಅಂಬಾನಿ ಅವರ ಮುಖಾಂತರ ಕರೆ ಮಾಡಿಸಿ, ಹೈಕಮಾಂಡ್ಗೆ ಸೂಟ್ಕೇಸ್ ನೀಡಿ ಟಿಕೆಟ್ ಪಡೆದಿದ್ದಾರೆ. ಅವರಿಗೆ ಟಿಕೆಟ್ ನೀಡಿರುವುದಕ್ಕೆ ಬಿಜೆಪಿಯಲ್ಲಿಯೇ ವಿರೋಧವಿದೆ’ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಬಿಎಂಎಲ್ ಕಾಂತರಾಜು, ಮುಖಂಡರಾದ ಗೌರಿಶಂಕರ್, ಕೇಶವಮೂರ್ತಿ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ. ನಾರಾಯಣಗೌಡ, ಕಾಂಗ್ರೆಸ್ ಅಧ್ಯಕ್ಷ ವಜ್ರಘಟ್ಟ ನಾಗರಾಜು ಭಾಗವಹಿಸಿದ್ದರು.