ಬೆಂಗಳೂರು: ಚಾಮರಾಜಪೇಟೆಯ ಹಳೆಕೋಟೆ ಹೈಸ್ಕೂಲ್ ಮೈದಾನದಲ್ಲಿ ಶ್ರೀರಾಮಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್ಸ್ ಟ್ರಸ್ಟ್ ಒಂದು ತಿಂಗಳಿನಿಂದ ನಡೆಸುತ್ತಿರುವ 86ನೇ ಶ್ರೀರಾಮನವಮಿ ಜಾಗತಿಕ ಸಂಗೀತ ಉತ್ಸವವು ಮೇ 10ರಂದು ಸಮಾರೋಪಗೊಳ್ಳಲಿದೆ.
ಸಮಾರೋಪ ಸಮಾರಂಭದಲ್ಲಿ ಬೆಳಿಗ್ಗೆ 8ಕ್ಕೆ ವಸಂತೋತ್ಸವ ನಡೆಯಲಿದೆ. ಸಂಜೆ 6ರಿಂದ 9ರವರೆಗೆ ಗ್ರ್ಯಾಮಿ ಪ್ರಶಸ್ತಿ ವಿಜೇತ ಗಾಯಕ ರಿಕ್ಕಿ ಕೇಜ್ ವಿಶೇಷ ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಬೆಂಗಳೂರಿನ ರಿಕ್ಕಿ ಕೇಜ್, ಮೂರು ಬಾರಿ ಗ್ರ್ಯಾಮಿ ಪ್ರಶಸ್ತಿ ಜೊತೆಗೆ, 20 ರಾಷ್ಟ್ರಗಳ 100ಕ್ಕೂ ಅಧಿಕ ಪ್ರಶಸ್ತಿ ಪಡೆದಿದ್ದಾರೆ‘ ಎಂದು ಸಂಘಟಕ ಎಸ್.ಎನ್. ವರದರಾಜ್ ತಿಳಿಸಿದ್ದಾರೆ.
ಏಪ್ರಿಲ್ 9ರಂದು ರಾಮನವಮಿ ಸಂಗೀತೋತ್ಸವ ಉದ್ಘಾಟನೆಗೊಂಡಿತ್ತು. ಶಾಸ್ತ್ರೀಯ ಸಂಗೀತಗಾರರಾದ ತ್ರಿಚೂರ್ ಸಹೋದರರು, ರಂಜನಿ ಗಾಯತ್ರಿ, ಮಲ್ಲಾಡಿ ಸಹೋದರರು, ಕುಮಾರೇಶ್, ಜಯಂತಿ ಕುಮರೇಶ್ ಸೇರಿದಂತೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಸಂಗೀತ ದಿಗ್ಗಜರು ಸಂಗೀತ ಕಛೇರಿಗಳನ್ನು ನಡೆಸಿಕೊಟ್ಟಿದ್ದರು.