ನೆಲಮಂಗಲ: ‘ಅನ್ನ, ವಸತಿ ಹಾಗೂ ವಿದ್ಯೆಯನ್ನು ಮಠಗಳು ನೀಡುತ್ತಿವೆ. ಸರ್ಕಾರಗಳು ಮಾಡಬೇಕಿರುವ ಕೆಲಸವನ್ನು ಮಠಗಳು ಮಾಡುತ್ತಿವೆ’ ಎಂದು ಶಾಸಕ ಎನ್.ಶ್ರೀನಿವಾಸ್ ಶ್ಲಾಘಿಸಿದರು.
ಶಿವಗಂಗೆ ಮೇಲಣಗವಿ ಮಠದಲ್ಲಿ ಹಮ್ಮಿಕೊಂಡಿದ್ದ ‘ರೇಣುಕಾಚಾರ್ಯ ಜಯಂತಿʼ, ನೂತನ ವಿದ್ಯಾರ್ಥಿನಿಲಯ ಉದ್ಘಾಟನೆ ಹಾಗೂ ‘ಶಿವಗಂಗಾ ಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಕರಿವೃಷಭ ಶಿವಯೋಗೀಶ್ವರ ಶ್ರೀಗಳು ಮಾತನಾಡಿ, ‘ಧಾರ್ಮಿಕ ಕಾರ್ಯಕ್ರಮಗಳಿಗೆ ಮಕ್ಕಳನ್ನು ಕರೆದುಕೊಂಡು ಹೋದಾಗ ಸಂಸ್ಕಾರ ದೊರೆಯುತ್ತದೆ. ಪರಂಪರೆ ಮುಂದುವರಿಯುತ್ತದೆ’ ಎಂದರು.
ಮೇಲಣಗವಿ ಮಲಯ ಶಾಂತಮುನಿ ಶ್ರೀಗಳು ಮಾತನಾಡಿ, ಮಠಗಳಿಗೆ ನೀಡಿದಂತಹ ಅನುದಾನಗಳನ್ನು ಕಾರಣಾಂತರಗಳಿಂದ ಹಿಂಪಡೆದಿದ್ದ ಸರ್ಕಾರವು ಮರಳಿಸಬೇಕು ಎಂದು ಒತ್ತಾಯಿಸಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕೇಂದ್ರ ಸಮಿತಿ ಸದಸ್ಯ ಎನ್.ಎಸ್.ನಟರಾಜು ಅವರಿಗೆ ‘ಶಿವಗಂಗಾ ಶ್ರೀ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಎಂ.ವಿ.ನೆಗಳೂರ ಅವರ ‘ವಿಚಾರ ಆಚಾರ ವಿಹಾರ’ ಕೃತಿ ಬಿಡುಗಡೆ ಮಾಡಲಾಯಿತು.