ಬೆಂಗಳೂರು: ವೈಟ್ ಫೀಲ್ಡ್ ಪ್ಯಾನಲ್ ಕ್ಯಾಬಿನ್ ಮತ್ತು ಕೃಷ್ಣರಾಜಪುರಂ ನಿಲ್ದಾಣಗಳ ನಡುವಿನ ಸೇತುವೆ ಕಾಮಗಾರಿ ಕೈಗೊಂಡಿರುವುದರಿಂದ ಬಂಗಾರಪೇಟೆ ಮೆಮು ವಿಶೇಷ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಸೇತುವೆ ಸಂಖ್ಯೆ 831ರಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಬಂಗಾರಪೇಟೆ–ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ರೈಲುಗಳ ಸಂಚಾರ ಫೆ.8 ಮತ್ತು 15ರಂದು ಇರುವುದಿಲ್ಲ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್–ಬಂಗಾರಪೇಟೆ ರೈಲುಗಳ ಸಂಚಾರವನ್ನು ಫೆ.9 ಮತ್ತು 16ರಂದು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು: ಅಮರಾವತಿ ಕಾಲೊನಿ ಮತ್ತು ತೋಳಹುಣಸೆ ಯಾರ್ಡ್ಗಳಲ್ಲಿ ಹಳಿ ನಿರ್ವಹಣಾ ಕಾಮಗಾರಿಯನ್ನು ನೈರುತ್ಯ ರೈಲ್ವೆ ಹಮ್ಮಿಕೊಂಡಿದೆ. ಈ ಮಾರ್ಗದಲ್ಲಿ ಫೆ.11ರಂದು ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್ಪ್ರೆಸ್ ಮತ್ತು ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ಪ್ರೆಸ್ ರೈಲು ಹರಿಹರ ಮತ್ತು ಚಿತ್ರದುರ್ಗ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.
ಮಾರ್ಗ ಬದಲಾವಣೆ: ಫೆ.14 ಮತ್ತು 18ರಂದು ಹೊಸಪೇಟೆ ನಿಲ್ದಾಣದಿಂದ ಹೊರಡುವ ಹೊಸಪೇಟೆ-ಹರಿಹರ ಪ್ಯಾಸೆಂಜರ್ ವಿಶೇಷ ರೈಲು ದಾವಣಗೆರೆ ಮತ್ತು ತೋಳಹುಣಸೆ ನಿಲ್ದಾಣಗಳಿಗೆ ತೆರಳದೇ ತೆಲಗಿ, ಅಮರಾವತಿ ಕಾಲೊನಿ, ಹರಿಹರ ಮಾರ್ಗದ ಮೂಲಕ ಸಂಚರಿಸಲಿದೆ.
ಬೆಳಗಾವಿ-ಮೈಸೂರು ವಿಶ್ವಮಾನವ ಡೈಲಿ ಎಕ್ಸ್ಪ್ರೆಸ್ ರೈಲನ್ನು ಫೆ.11ರಂದು ಮಾರ್ಗ ಮಧ್ಯದಲ್ಲಿ 55 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ಬೆಂಗಳೂರು ಎಕ್ಸ್ಪ್ರೆಸ್ ರೈಲನ್ನು ಫೆ.14ರಂದು ಮಾರ್ಗ ಮಧ್ಯೆ 60 ನಿಮಿಷ ನಿಲ್ಲಿಸಲಾಗುವುದು ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.