ಬೆಂಗಳೂರು: ಬೆಂಗಳೂರು ಉತ್ತರ, ದಕ್ಷಿಣ ಮತ್ತು ಕೇಂದ್ರ ಲೋಕಸಭಾ ಕ್ಷೇತ್ರಗಳ ಮತಗಟ್ಟೆ ಅಧಿಕಾರಿಗಳಿಗೆ ನಡೆಯುತ್ತಿರುವ ತರಬೇತಿ ಕೇಂದ್ರಗಳಿಗೆ ಜಿಲ್ಲಾ ಚುನಾವಣಾಧಿಕಾರಿ ಆಗಿರುವ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೆಬ್ಬಾಳ, ಕಾಡುಗೊಂಡನಹಳ್ಳಿ, ಡಾ.ಬಿ.ಆರ್. ಅಂಬೇಡ್ಕರ್ ವೈದ್ಯಕೀಯ ಕಾಲೇಜು, ಶಿವಾಜಿನಗರದ ಸರ್ಕಾರಿ ಕಲಾ ಕಾಲೇಜು, ಯಲಹಂಕದ ಶೇಷಾದ್ರಿಪುರಂ ಕಾಲೇಜುಗಳಲ್ಲಿ ತರಬೇತಿ ನಡೆಯುತ್ತಿದೆ.
‘ಮತದಾನದ ದಿನ ಮತಗಟ್ಟೆಗಳ ಬಳಿ ನಡೆಯುವ ಎಲ್ಲಾ ಚಟುವಟಿಕೆಗಳ ಕುರಿತು ಮಾಸ್ಟರ್ ಟ್ರೈನರ್ಗಳು ತರಬೇತಿಯಲ್ಲಿ ವಿವರವಾಗಿ ಮಾಹಿತಿ ನೀಡಲಿದ್ದಾರೆ. ಇದರಿಂದ ಮತದಾನದ ದಿನ ಯಾವುದೇ ಸಮಸ್ಯೆಯಾಗದಂತೆ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು ಸಹಕಾರಿಯಾಗಲಿದೆ’ ಎಂದು ತುಷಾರ್ ಗಿರಿನಾಥ್ ತಿಳಿಸಿದರು.
ತರಬೇತಿಯ ವೇಳೆ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಅಸಿಸ್ಟೆಂಟ್ ಪ್ರಿಸೈಡಿಂಗ್ ಅಧಿಕಾರಿಗಳಿಗೆ ಕೈಪಿಡಿ ನೀಡಲಾಗುವುದು. ಅದರಲ್ಲಿ ಸಂಪೂರ್ಣ ವಿವರಗಳು ಇರಲಿವೆ. ಯಾವುದೇ ಸಂದೇಹಗಳಿದ್ದಲ್ಲಿ ಕೈಪಿಡಿಯಲ್ಲಿ ನೋಡಿಕೊಳ್ಳಬಹುದು. ಕೈಪಿಡಿಯು ಭಾರತ ಚುನಾವಣಾ ಅಯೋಗ ಹಾಗೂ ಕರ್ನಾಟಕ ಚುನಾವಣಾ ಆಯೋಗಗಳ ವೆಬ್ಸೈಟ್ನಲ್ಲೂ ಲಭ್ಯವಿದ್ದು, ಡೌನ್ಲೋಡ್ ಮಾಡಿಕೊಂಡು ವಿವರಗಳನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು.
ಮಾಸ್ಟರ್ ಟ್ರೈನರ್ಗಳು ಮತದಾನದ ದಿನ ನಡೆಯುವ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಲಿದ್ದಾರೆ. ತರಬೇತಿಯ ಬಳಿಕ ಎಲ್ಲ ಮತದಾನ ಅಧಿಕಾರಿಗಳಿಗೆ ವಿವಿ ಪ್ಯಾಟ್, ಕಂಟ್ರೋಲ್ ಯೂನಿಟ್ ಹಾಗೂ ಬ್ಯಾಲೆಟ್ ಯೂನಿಟ್ ಹೇಗೆ ಕಾರ್ಯನಿರ್ವಹಿಸಲಿದೆ ಎಂಬುದರ ಬಗ್ಗೆ ಅಣಕು ಮತದಾನ ಪ್ರದರ್ಶನ ಮೂಲಕ ತಿಳಿಸಿಕೊಡಲಾಗುತ್ತದೆ ಎಂದು ಹೇಳಿದರು.