ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರಗಳ ವಿರುದ್ಧ ಆಕ್ರೋಶ ಭುಗಿಲು

ವಿದ್ಯಾರ್ಥಿಗಳು, ಮಹಿಳಾ ಸಂಘಟನೆಗಳಿಂದ ಭಾರಿ ಪ್ರತಿಭಟನೆ
Last Updated 13 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಕಠುವಾ ಮತ್ತು ಉನ್ನಾವ್‌ ಅತ್ಯಾಚಾರ ಪ್ರಕರಣಗಳ ವಿರುದ್ಧದ ಆಕ್ರೋಶ ಮುಗಿಲುಮುಟ್ಟಿದೆ. ವಿದ್ಯಾರ್ಥಿಗಳು ಮಹಿಳಾ ಸಂಘಟನೆಗಳ ಸದಸ್ಯರು ಪಾರ್ಲಿಮೆಂಟ್‌ ಸ್ಟ್ರೀಟ್‌ನಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರತಿಭಟನಕಾರರು ಪ್ರಶ್ನಿಸಿದ್ದಾರೆ.

‘ಎರಡು ಅತ್ಯಾಚಾರಗಳು ಜನರ ಮನಸ್ಸನ್ನು ಕಲಕಿವೆ. ಈ ಅಪರಾಧದ ಕ್ರೌರ್ಯದ ಕಾರಣಕ್ಕಷ್ಟೇ ಜನರು ಆಘಾತಗೊಂಡಿದ್ದಲ್ಲ. ಆಡಳಿತಾರೂಢ ಬಿಜೆಪಿಯೇ ಆರೋ‍‍ಪಿಗಳನ್ನು ರಕ್ಷಿಸುತ್ತಿದೆ ಎಂಬುದು ಜನರ ತಲ್ಲಣಕ್ಕೆ ಕಾರಣವಾಗಿದೆ. ಅತ್ಯಾಚಾರ ಆರೋಪಿಗಳನ್ನು ಬಂಧಿಸುವುದರ ವಿರುದ್ಧ ನಡೆದ ಬಂದ್‌ ಮತ್ತು ಪ್ರತಿಭಟನೆಗಳಿಗೆ ಸಚಿವರೇ ಬೆಂಬಲ ನೀಡಿದ್ದಾರೆ’ ಎಂದು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆಯ ದೆಹಲಿ ರಾಜ್ಯ ಘಟಕದ ಕಾರ್ಯದರ್ಶಿ ನೀರಜ್‌ ಕುಮಾರ್‌ ಹೇಳಿದ್ದಾರೆ.

ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (ಎಐಪಿಡಬ್ಲ್ಯುಎ), ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ, ಜೆಎನ್‌ಯು ವಿದ್ಯಾರ್ಥಿ ಸಂಘಟನೆ, ಸ್ಟೂಡೆಂಟ್‌ ಫೆಡರೇಷನ್‌ ಆಫ್‌ ಇಂಡಿಯಾ ಮುಂತಾದ ಸಂಘಟನೆಗಳು ಪ‍್ರತಿಭಟನೆಯಲ್ಲಿ ಭಾಗವಹಿಸಿದ್ದವು.

‘ಬಿಜೆಪಿ ಆಡಳಿತದ ಎರಡು ರಾಜ್ಯಗಳಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳ ಆರೋಪಿಗಳನ್ನು ರಕ್ಷಿಸಲಾಗುತ್ತಿದೆ. ಆದರೆ, ಪ್ರತಿ ವಿಷಯದ ಬಗ್ಗೆಯೂ ಟ್ವೀಟ್‌ ಮಾಡುವುದಕ್ಕೆ ಹೆಸರಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದು ಪ್ರತಿಕ್ರಿಯೆಗೆ ಅರ್ಹವಾದ ವಿಚಾರ ಎಂದೇ ಅನಿಸಿಲ್ಲ. ದೇಶದ ಹೆಣ್ಣು ಮಕ್ಕಳಿಗೆ ಆಡಳಿತ ಪಕ್ಷದಿಂದ ರಕ್ಷಣೆ ಬೇಕಾಗಿದೆ’ ಎಂದು ಕುಮಾರ್‌ ಹೇಳಿದ್ದಾರೆ.

‘ಉನ್ನಾವ್‌ ಅತ್ಯಾಚಾರ ಪ್ರಕರಣದ ಆರೋಪಿ, ಬಿಜೆಪಿ ಶಾಸಕ ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಆದರೆ ಸಂತ್ರಸ್ತೆಯ ತಂದೆ ಮೃತಪಟ್ಟಿದ್ದಾರೆ. ಕಠುವಾದಲ್ಲಿ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಆಗಿದೆ. ಆದರೆ, ಪ್ರಕರಣಕ್ಕೆ ಕೋಮು ಬಣ್ಣ ಬಳಿದು ಆರೋಪಿಗಳನ್ನು ರಕ್ಷಿಸಲು ಯತ್ನಿಸಲಾಗುತ್ತಿದೆ. ಸಂತ್ರಸ್ತರು ಮತ್ತು ಆರೋಪಿಗಳ ಜಾತಿ ಈ ದೇಶದಲ್ಲಿ ನ್ಯಾಯವನ್ನು ನಿರ್ಧರಿಸುತ್ತದೆಯೇ’ ಎಂದು ಎಐಪಿಡಬ್ಲ್ಯುಎ ರಾಷ್ಟ್ರೀಯ ಕಾರ್ಯದರ್ಶಿ ಕವಿತಾ ಕೃಷ್ಣನ್‌ ಪ್ರಶ್ನಿಸಿದ್ದಾರೆ.

ಅತ್ಯಾಚಾರ ಆರೋಪಿಗಳನ್ನು ರಕ್ಷಿಸುವ ಸರ್ಕಾರವನ್ನು ಈ ದೇಶದ ಜನರು ಸಹಿಸುವುದಿಲ್ಲ ಎಂದು ಡೆಮಾಕ್ರಟಿಕ್‌ ವಿಮೆನ್ಸ್‌ ಅಸೋಸಿಯೇಷನ್‌ ಪ್ರಧಾನ ಕಾರ್ಯದರ್ಶಿ ಮರಿಯಮ್‌ ಧವಳೆ ಹೇಳಿದ್ದಾರೆ.

ಮೋಂಬತ್ತಿ ಪ್ರತಿಭಟನೆ: ಕಠುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ತಡರಾತ್ರಿ ನವದೆಹಲಿಯ ಇಂಡಿಯಾ ಗೇಟ್ ಬಳಿ ಮೋಂಬತ್ತಿ ಪ್ರತಿಭಟನೆ ನಡೆಸಿದ್ದಾರೆ.

‘ಕೋಟ್ಯಂತರ ಭಾರತೀಯರ ಹೃದಯಗಳು ದುಃಖದಿಂದ ಭಾರವಾಗಿರುವ ಹಾಗೆಯೇ ನನ್ನ ಹೃದಯವೂ ಭಾರವಾಗಿದೆ. ಮಹಿಳೆಯರನ್ನು ಈ ರೀತಿ ನಡೆಸಿಕೊಳ್ಳುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದನ್ನು ಖಂಡಿಸಲು ಮತ್ತು ಸಂತ್ರಸ್ತರಿಗೆ ನ್ಯಾಯ ಸಿಗಲೆಂದು ಒತ್ತಾಯಿಸಲು ಮೋಂಬತ್ತಿ ಮೆರವಣಿಗೆಯನ್ನು ಮೌನವಾಗಿ ಮತ್ತು ಶಾಂತಿಯುತವಾಗಿ ನಡೆಸಲು ಇಂದು ಮಧ್ಯರಾತ್ರಿ ಇಂಡಿಯಾ ಗೇಟ್ ಬಳಿ ಸೇರೋಣ’ ಎಂದು ರಾಹುಲ್ ಗುರುವಾರ ರಾತ್ರಿ 11ರ ಹೊತ್ತಿಗೆ ಟ್ವೀಟ್‌ ಮಾಡಿ ಕರೆ ನೀಡಿದ್ದರು.

ಅಂತೆಯೇ ರಾತ್ರಿ 12ರ ನಂತರ ರಾಹುಲ್ ಮೋಂಬತ್ತಿ ಹಿಡಿದು ಇಂಡಿಯಾ ಗೇಟ್ ಬಳಿ ಬಂದರು. ಆ ವೇಳೆಗಾಗಲೇ ಕಾಂಗ್ರೆಸ್‌ನ ನೂರಾರು ಕಾರ್ಯಕರ್ತರು ಮತ್ತು ನೂರಾರು ವಿದ್ಯಾರ್ಥಿಗಳು ಮೋಂಬತ್ತಿ ಹಿಡಿದು ಮೆರವಣಿಗೆಗೆ ಅಲ್ಲಿ ತಯಾರಿ ನಡೆಸಿದ್ದರು. ಮೆರವಣಿಗೆ ಆರಂಭವಾಗುವ ವೇಳೆಗೆ ವಿವಿಧ ಸ್ವಯಂಸೇವಾ ಸಂಸ್ಥೆಗಳ ಸದಸ್ಯರು, ಮಹಿಳಾ ಸಂಘಟನೆಗಳ ಸದಸ್ಯರು ನೂರಾರು ಸಂಖ್ಯೆಯಲ್ಲಿ ಜತೆಯಾದರು. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ, ರಾಬರ್ಟ್ ವಾದ್ರಾ ಮತ್ತು ಕಾಂಗ್ರೆಸ್‌ನ ಹಲವು ನಾಯಕರೂ ಮೆರವಣಿಗೆಯಲ್ಲಿ ಪಾಲ್ಗೊಂಡರು. ಮೆರವಣಿಗೆ ಇಂಡಿಯಾ ಗೇಟ್ ತಲುಪಿದ ನಂತರ, ಮೆರವಣಿಗೆಯ ಉದ್ದೇಶದ ಬಗ್ಗೆ ರಾಹುಲ್ ಮಾತನಾಡಿದರು.

‘ಇಂಥ ಹೇಯ, ಪೈಶಾಚಿಕ ಕೃತ್ಯ ಎಸಗಿದವರನ್ನು ಹೇಗೆ ರಕ್ಷಿಸುತ್ತಿದ್ದೀರಿ? ಮಗಳನ್ನು ರಕ್ಷಿಸಿ, ಮಗಳನ್ನು ಓದಿಸಿ ಎಂಬ ನಿಮ್ಮ ಘೋಷಣೆ ಚೆನ್ನಾಗಿದೆ. ಆದರೆ ಆ ಘೋಷಣೆಯನ್ನು ಅನುಷ್ಠಾನಕ್ಕೆ ತರಲು ಕ್ರಮ ತೆಗೆದುಕೊಳ್ಳಿ’ ಎಂದು ಅವರು ಒತ್ತಾಯಿಸಿದರು.

‘2012ರಲ್ಲಿ ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ದೇಶದಾದ್ಯಂತ ನಡೆದ ಪ್ರತಿಭಟನೆಯಂಥದ್ದೇ ವಾತಾವರಣವನ್ನು ಈಗಲೂ ಸೃಷ್ಟಿಸಲು ರಾಹುಲ್ ಪ್ರಯತ್ನಿಸಿದ್ದಾರೆ. ಈ ಹೋರಾಟದಿಂದ ರಾಜಕೀಯವನ್ನು ದೂರವಿಡಲು ಅವರು ಬಯಸಿದ್ದರು. ಹೀಗಾಗಿಯೇ ಮೋಂಬತ್ತಿ ಮೆರವಣಿಗೆಯಲ್ಲಿ ಭಾಗವಹಿಸಲು ಅವರು ಸ್ವಯಂಸೇವಾ ಸಂಸ್ಥೆಗಳು, ಮಹಿಳಾ ಸಂಘಟನೆಗಳು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಮಾತ್ರ ಕರೆ ನೀಡಿದ್ದರು’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮೋದಿಗೆ ಎರಡು ಪ್ರಶ್ನೆಗಳು

ಅತ್ಯಾಚಾರ ಪ್ರಕರಣಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ರಾಹುಲ್ ಟ್ವೀಟ್‌ನಲ್ಲಿ ಎರಡು ಪ್ರಶ್ನೆಗಳನ್ನು ಕೇಳಿದ್ದಾರೆ.

‘ಮಾನ್ಯ ಪ್ರಧಾನಿಗಳೇ ಈ ವಿಚಾರದಲ್ಲಿ ನಿಮ್ಮ ಮೌನವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. 1. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನೀವೇನು ಹೇಳುತ್ತೀರಿ? 2. ಅತ್ಯಾಚಾರಿಗಳು ಮತ್ತು ಕೊಲೆಗಾರರನ್ನು ಸರ್ಕಾರಗಳೇ ಏಕೆ ರಕ್ಷಿಸುತ್ತಿವೆ? ನಿಮ್ಮ ಉತ್ತರಕ್ಕಾಗಿ ಭಾರತ ಎದುರು ನೋಡುತ್ತಿದೆ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

* ಸರ್ಕಾರ ನಿದ್ದೆ ಮಾಡುತ್ತಿದ್ದರೆ, ದೇಶದ ಚೌಕಿದಾರನೂ ನಿದ್ದೆ ಮಾಡುತ್ತಾನೆ. ಅವರನ್ನೆಲ್ಲಾ ಎಚ್ಚರಿಸುವ ಜವಾಬ್ದಾರಿಯನ್ನು ನಾವು ತೆಗೆದುಕೊಂಡಿದ್ದೇವೆ

-ಕಪಿಲ್ ಸಿಬಲ್, ಕಾಂಗ್ರೆಸ್‌ನ ಹಿರಿಯ ಮುಖಂಡ

* ಯಾವುದೇ ಅಪರಾಧಿ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ನಾನು ದೇಶಕ್ಕೆ ಭರವಸೆ ನೀಡುತ್ತೇನೆ. ನಮ್ಮ ಹೆಣ್ಣು ಮಕ್ಕಳಿಗೆ ನ್ಯಾಯ ಸಿಕ್ಕೇ ಸಿಗುತ್ತದೆ

-ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT