ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಲಗ್ಗೆರೆ ವಾರ್ಡ್ನ ಪ್ರೀತಿ ಬಡಾವಣೆಯಲ್ಲಿ ಬೆಥಲ್ ಶಿಕ್ಷಣ ಸಂಸ್ಥೆ ಕಟ್ಟಡದ ಅಂತಸ್ತುಗಳನ್ನು ಅಕ್ರಮವಾಗಿ ಹೆಚ್ಚಿಸುತ್ತಿರುವ ಕುರಿತ ದೂರಿನ ತನಿಖೆಗೆ ಸಹಕಾರ ನೀಡದ ಅಧಿಕಾರಿಗಳ ವಿರುದ್ಧ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
‘ಕಟ್ಟಡವನ್ನು ಗುರುವಾರ ಪರಿಶೀಲನೆ ನಡೆಸುವ ಬಗ್ಗೆ ರಾಜರಾಜೇಶ್ವರಿ ವಲಯದ ಜಂಟಿ ಆಯುಕ್ತರಿಗೆ ಒಂದು ವಾರ ಮುನ್ನವೇ ಮಾಹಿತಿ ನೀಡಿದ್ದೆವು. ಸ್ಥಳಕ್ಕೆ ಬಂದಿದ್ದ ಅವರು ನನ್ನನ್ನು ಭೇಟಿಯಾಗದೆಯೇ ಹಿಂದಕ್ಕೆ ಹೋದರು. ವಾರ್ಡ್ನ ಉಸ್ತುವಾರಿ ಹೊತ್ತ ಎಂಜಿನಿಯರ್ ಸ್ಥಳಕ್ಕೆ ಬರಲೇ ಇಲ್ಲ. ಅವರು ಯಾರ ಒತ್ತಡಕ್ಕೆ ಸಿಲುಕಿ ಹೀಗೆ ಮಾಡಿದ್ದಾರೋ ಗೊತ್ತಿಲ್ಲ. ಈ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು’ ಎಂದು ಅವರು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಳೆ ಕಟ್ಟಡದ ತಳ ಅಂತಸ್ತಿನ ಸಾಮರ್ಥ್ಯ ಪರಿಶೀಲಿಸದೆಯೇ ಹೆಚ್ಚುವರಿ ಅಂತಸ್ತು ನಿರ್ಮಿಸಲಾಗುತ್ತಿದೆ. ಅಧಿಕಾರಿಗಳ ಬೇಜವಾಬ್ದಾರಿಯಿಂದಾಗಿ, ಈ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಅಪಾಯಕ್ಕೆ ಸಿಲುಕುವಂತಾಗಿದೆ’ ಎಂದರು.
ಸಹಕರಿಸದ ಶಿಕ್ಷಣ ಸಂಸ್ಥೆ:‘ನಾವು ಪರಿಶೀಲನೆಗೆ ತೆರಳಿದಾಗ ಬೆಥಲ್ ಕಾಲೇಜಿನ ಆಡಳಿತ ಮಂಡಳಿ ಸಹಕಾರ ನೀಡಿಲ್ಲ. ಗೇಟಿಗೆ ಬೀಗ ಹಾಕಿ ದ ಸಿಬ್ಬಂದಿ ನಾವು ಒಳಗೆ ಪ್ರವೇಶಿಸದಂತೆ ತಡೆದರು’ ಎಂದರು.
‘ ಈ ಶಿಕ್ಷಣ ಸಂಸ್ಥೆ ಅಕ್ರಮವಾಗಿ ನಿರ್ಮಿಸಿರುವ ಹೆಚ್ಚುವರಿ ಅಂತಸ್ತುಗಳನ್ನು ಕೆಡವಲು ಸೂಚನೆ ನೀಡುತ್ತೇವೆ. ಸಂಸ್ಥೆ 10 ಗುಂಟೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದೆ. ಈ ಬಗ್ಗೆಯೂ’ ಎಂದು ತಿಳಿಸಿದರು.
‘ದಾಸರಹಳ್ಳಿ ವಲಯದಲ್ಲಿ ಹೆಸರಘಟ್ಟ ಮುಖ್ಯರಸ್ತೆಯ ಬಳಿ ಹಿಂದುಜಾ ಪ್ರಾಪರ್ಟೀಸ್ ಸಂಸ್ಥೆ ನಿರ್ಮಿಸುತ್ತಿರುವ ಹಿಲ್ಟಾಪ್ ವಸತಿ ಸಮುಚ್ಚಯದ ಸ್ಥಳ ಪರಿಶೀಲನೆಗೆ ಹಿರಿಯ ಅಧಿಕಾರಿಗಳು ಹಾಜರಾಗಿದ್ದರು. ಆದರೆ, ವಾರ್ಡ್ನ ಎಂಜಿನಿಯರ್ ಹಾಗೂ ಸಹಾಯಕ ಎಂಜಿನಿಯರ್ ಗೈರು ಹಾಜರಾಗಿದ್ದರು. ಅವರ ವಿರುದ್ಧವೂ ಕ್ರಮಕ್ಕೆ ಶಿಫಾರಸು ಮಾಡುತ್ತೇನೆ’ ಎಂದರು.
**
ಅಧಿಕಾರಿಗಳ ಹೆಸರೇ ಗೊತ್ತಿಲ್ಲ
‘ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಯಾವ ಅಧಿಕಾರಿ ಸ್ಥಳದಲ್ಲಿರಬೇಕಿತ್ತು? ಅವರ ಹೆಸರು ಏನು’ ಎಂದು ಪ್ರಶ್ನಿಸಿದಾಗ, ‘ಅವರು ಹೆಸರು ನನಗೆ ಗೊತ್ತಿಲ್ಲ’ ಎಂದು ಮಂಜುಳಾ ಉತ್ತರಿಸಿದರು.