ಬೆಂಗಳೂರು: ನಗರದಲ್ಲಿ ಅಳವಡಿಸಿರುವ ಅನಧಿಕೃತ ಜಾಹೀರಾತು ಫಲಕಗಳು ಹಾಗೂ ಗೋಡೆಗಳ ಮೇಲೆ ಅಂಟಿಸಿರುವ ಪೋಸ್ಟರ್ಗಳ ತೆರವು ಕಾರ್ಯಾಚರಣೆಗೆ ಮೇಯರ್ ಆರ್.ಸಂಪತ್ ರಾಜ್ ಶುಕ್ರವಾರ ಚಾಲನೆ ನೀಡಿದರು.
ದಕ್ಷಿಣ ವಲಯದ ಮಿನರ್ವ ವೃತ್ತ ಹಾಗೂ ಸುತ್ತಲಿನ ಪ್ರದೇಶದಲ್ಲಿ ಹಾಕಿದ್ದ ಅಕ್ರಮ ಜಾಹೀರಾತು ಹಾಗೂ ಪೋಸ್ಟರ್ಗಳನ್ನು ಮೇಯರ್, ಉಪಮೇಯರ್ ಪದ್ಮಾವತಿ ನರಸಿಂಹಮೂರ್ತಿ, ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್ ತೆರವುಗೊಳಿಸಿದರು.
ಮಿನರ್ವ ವೃತ್ತದ ಬಳಿ 60X30 ಅಳತೆಯ ಅಕ್ರಮ ಜಾಹೀರಾತು ಫಲಕವನ್ನು ಕ್ರೇನ್ ಸಹಾಯದಿಂದ ಕಿತ್ತುಹಾಕಲಾಯಿತು. ವಿದ್ಯುತ್ ಕಂಬಗಳಿಗೆ ಅಳವಡಿಸಿದ್ದ ಫ್ಲೆಕ್ಸ್ಗಳು, ಮರಗಳಿಗೆ ಅಂಟಿಸಿದ್ದ ಪೋಸ್ಟರ್ಗಳನ್ನು ತೆರವುಗೊಳಿಸಲಾಯಿತು.
‘ಅನಧಿಕೃತ ಜಾಹೀರಾತು ಫಲಕಗಳನ್ನು ಅಳವಡಿಸಿರುವ ಕಂಪನಿಗಳ ವಿರುದ್ಧ ಹೈಕೋರ್ಟ್ ಆದೇಶದ ಪ್ರಕಾರ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮರಗಳು ಮತ್ತು ವಿದ್ಯುತ್ ಕಂಬಗಳ ಮೇಲೆ ಪೋಸ್ಟರ್ ಅಂಟಿಸುವುದು, ಫ್ಲೆಕ್ಸ್ ಹಾಕುವವರ ವಿರುದ್ಧವೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ದಂಡವನ್ನೂ ವಿಧಿಸುತ್ತೇವೆ’ ಎಂದು ಆರ್.ಸಂಪತ್ ರಾಜ್ ತಿಳಿಸಿದರು.
‘ಎಲ್ಲ ವಲಯಗಳಲ್ಲಿರುವ ಅಕ್ರಮ ಫಲಕಗಳ ಪಟ್ಟಿಯನ್ನು ಸಿದ್ಧಪಡಿಸಿ, ಅವುಗಳನ್ನು ತೆರವುಗೊಳಿಸುವಂತೆ ಜಂಟಿ ಆಯುಕ್ತರು, ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.