ಬೆಂಗಳೂರು: ಬಳ್ಳಾರಿ ರಸ್ತೆಯ ಕೊಡಿಗೇಹಳ್ಳಿ ಮೇಲ್ಸೇತುವೆಯಲ್ಲಿ ಭಾನುವಾರ ಟಿಪ್ಪರ್ ಡಿಕ್ಕಿ ಹೊಡೆದು ಮಂಜುನಾಥ್ (33) ಎಂಬುವರು ಮತ್ತು ಆರ್ಎಂಸಿ ಯಾರ್ಡ್ ಆವರಣದಲ್ಲಿ ಲಾರಿ ಹರಿದು ನಟರಾಜ್ (45) ಎಂಬುವರು ಮೃತಪಟ್ಟಿದ್ದಾರೆ.
ಮತ್ತೀಕೆರೆ ನಿವಾಸಿಯಾದ ಮಂಜುನಾಥ್, ಮಗಳು ಜಾಹ್ನವಿ (3) ಮತ್ತು ತಾಯಿ ಭದ್ರಮ್ಮ ಅವರೊಂದಿಗೆ ಬೈಕ್ನಲ್ಲಿ ಬೆಳಿಗ್ಗೆ ಯಲಹಂಕಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಮಂಜುನಾಥ್, ನಿಯಂತ್ರಣ ತಪ್ಪಿ ಟಿಪ್ಪರ್ಗೆ ಹಿಂದಿನಿಂದ ಬೈಕ್ ಗುದ್ದಿಸಿದ್ದಾರೆ. ಈ ವೇಳೆ ಬೈಕ್ನಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸಂಜೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.
ಮಂಜುನಾಥ್, ಕೂಲಿ ಕಾರ್ಮಿಕರಾಗಿದ್ದರು. ಘಟನೆಯಲ್ಲಿ ಜಾಹ್ನವಿ ಮತ್ತು ಭದ್ರಮ್ಮ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಯಲಹಂಕ ಸಂಚಾರ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಮತ್ತೊಂದು ಪ್ರಕರಣ: ವಿದ್ಯಾರಣ್ಯಪುರ ನಿವಾಸಿಯಾದ ನಟರಾಜ್ ಅವರು ಆರ್ಎಂಸಿ ಯಾರ್ಡ್ನಲ್ಲಿ ಹಮಾಲಿ ಕೆಲಸ ಮಾಡುತ್ತಿದ್ದರು.
ಮಧ್ಯಾಹ್ನ ಆರ್ಎಂಸಿ ಯಾರ್ಡ್ ಆವರಣದಲ್ಲಿ ನಡೆದು ಹೋಗುತ್ತಿದ್ದ ಅವರ ಮೇಲೆ ಲಾರಿ ಹರಿದಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯಶವಂತಪುರ ಸಂಚಾರ ಠಾಣೆ ಪೊಲೀಸರು ಚಾಲಕನನ್ನು ಬಂಧಿಸಿ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.
ಸರಗಳವು
ಬಸವನಗುಡಿಯ ನೆಟ್ಟಕಲ್ಲಪ್ಪ ವೃತ್ತದ ಬಳಿ ಶನಿವಾರ ಬೆಳಿಗ್ಗೆ ಕಿಡಿಗೇಡಿಗಳು ಕವನ ಎಂಬುವರ 15 ಗ್ರಾಂ ತೂಕದ ಚಿನ್ನದ ಸರ ದೋಚಿದ್ದಾರೆ.
ಗಿರಿನಗರ ನಿವಾಸಿಯಾದ ಕವನ ಅವರು ನೆಟ್ಟಕಲ್ಲಪ್ಪ ವೃತ್ತದ ಬಳಿ ಆಟೊಗೆ ಕಾಯುತ್ತಿದ್ದಾಗ ಇಬ್ಬರು ಸರಗಳ್ಳರು ಬೈಕ್ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ. ಬಸವನಗುಡಿ ಠಾಣೆಯಲ್ಲಿ ದೂರು ದಾಖಲಾಗಿದೆ.