ಬೆಂಗಳೂರು: `ರಾಜ್ಯ ಸರ್ಕಾರವು ಪ್ರಸಕ್ತ ವರ್ಷದಲ್ಲಿ ಎಲ್ಲಾ ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಮಾನವ ಅಭಿವೃದ್ಧಿ ವರದಿ ತಯಾರಿಸುವ ಯೋಜನೆಯನ್ನು ರೂಪಿಸಿದ್ದು, ಈ ಪ್ರಕ್ರಿಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಚಾಲನೆಯಲ್ಲಿದೆ' ಎಂದು ಬೆಂಗಳೂರು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ವಿ.ತಿರುವರಂಗ ನಾರಾಯಣ ಸ್ವಾಮಿ ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ನಡೆದ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆಯ ಜಿಲ್ಲಾಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
`ರಾಷ್ಟ್ರೀಯ ಉತ್ಪನ್ನದ ಜತೆಗೆ ಮಾನವ ಅಭಿವೃದ್ಧಿಯ ಮೌಲ್ಯಮಾಪನವನ್ನು ಒಳಗೊಂಡ ಅಂಶಗಳನ್ನು ಪರಿಗಣಿಸಬೇಕು ಎಂದು ವಿಶ್ವ ಸಂಸ್ಥೆ ಪ್ರತಿಪಾದಿಸಿದೆ. ಆ ನಿಟ್ಟಿನಲ್ಲಿ ಯೋಜನೆಯನ್ನು ರೂಪಿಸಲಾಗುತ್ತಿದೆ. ವಿಶ್ವಸಂಸ್ಥೆ, ರಾಷ್ಟ್ರ, ರಾಜ್ಯ ಸರ್ಕಾರಕ್ಕೆ ಪೂರಕ ವಾತಾವರಣವನ್ನು ಕಲ್ಪಿಸುವ ಕಾರ್ಯಾಗಾರವನ್ನು ಅನುಷ್ಠಾನಗೊಳಿಸಬೇಕು' ಎಂದು ತಿಳಿಸಿದರು.
ವಿಶ್ವಸಂಸ್ಥೆಯ ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧಿಕಾರಿ ಡಾ. ಶ್ರೀಲಕ್ಷ್ಮಿ ಗುರುರಾಜ್, `ಮಾನವ ಅಭಿವೃದ್ಧಿ ಎಂದರೆ ಶಿಕ್ಷಣ, ಆರೋಗ್ಯ ಮತ್ತು ಜೀವನಮಟ್ಟವೆಂದು ಪರಿಗಣಿಸಲಾಗುತ್ತಿತ್ತು. ಆದರೆ, ಈಗ ಸಮಾಜ ಎದುರಿಸುತ್ತಿರುವ ಸೂಕ್ಷ್ಮ ಸಮಸ್ಯೆಗಳನ್ನು ಸಹ ಮಾನವ ಅಭಿವೃದ್ಧಿಯೆಂದು ಪರಿಗಣಿಸಬೇಕಾಗಿದೆ. ಮಾನವ ಅಭಿವೃದ್ಧಿ ವರದಿಯನ್ನು ತಯಾರಿಸುವುದರಿಂದ ಜಿಲ್ಲೆಗಳಿಗೆ ಬೇಕಾಗುವ ಅನುದಾನವನ್ನು ಬಿಡುಗಡೆ ಮಾಡಲು ಸಹಾಯಕವಾಗಲಿದೆ' ಎಂದು ಹೇಳಿದರು.