ಬೆಂಗಳೂರು: ‘ಇಂದಿರಾ ಕ್ಯಾಂಟೀನ್ನಲ್ಲಿ ಬೆಳಗಿನ ಉಪಾಹಾರಕ್ಕೆ ಇಡ್ಲಿ–ವಡೆ ಪೂರೈಸಲಾಗುವುದು’ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜತೆ ಗುರುವಾರ ಮಾತನಾಡಿದ ಅವರು, ‘ಇಡ್ಲಿ–ವಡೆ ಪೂರೈಸಬೇಕು ಎಂದು ಸಾರ್ವಜನಿಕರು ಬೇಡಿಕೆ ಸಲ್ಲಿಸಿದ್ದಾರೆ. ಕ್ಯಾಂಟೀನ್ನ ತಿಂಡಿ ಮತ್ತು ಊಟದಲ್ಲಿ ಏನಿರಬೇಕು ಎಂಬ ಆಹಾರ ಪಟ್ಟಿಯನ್ನು ಸದ್ಯವೇ ಸಿದ್ಧಪಡಿಸಲಾಗುವುದು’ ಎಂದರು.
‘ಆಹಾರ ಪದಾರ್ಥ ರುಚಿಯಾಗಿರಬೇಕು ಎಂಬ ಕಾರಣಕ್ಕೆ ಈರುಳ್ಳಿ ಬೆಳ್ಳುಳ್ಳಿ ಬಳಸಿ ತಿಂಡಿ, ಊಟ ತಯಾರಿಸಬೇಕು ಎಂದು ಷರತ್ತು ವಿಧಿಸಲು ನಿರ್ಧರಿಸಲಾಗಿದೆ. ಅದಕ್ಕೆ ಒಪ್ಪಿಗೆ ಇದ್ದರೆ ಇಸ್ಕಾನ್ ಸಂಸ್ಥೆಯವರು ಇಂದಿರಾ ಕ್ಯಾಂಟೀನ್ ಟೆಂಡರ್ನಲ್ಲಿ ಭಾಗವಹಿಸಬಹುದು’ ಎಂದೂ ಅವರು ಹೇಳಿದರು.
‘ಕ್ಯಾಂಟೀನ್ ನಡೆಸುವ ಟೆಂಡರ್ನಲ್ಲಿ ಪಾಲ್ಗೊಳ್ಳುವಂತೆ ಮಹಿಳಾ ಸ್ವಸಹಾಯ ಸಂಘಗಳನ್ನೂ ಆಹ್ವಾನಿಸಲಾಗಿದೆ. ವಾರ್ಡುವಾರು ಅಡುಗೆ ಮಾಡಿದರೆ ತಾಜಾ ಆಹಾರ ಪೂರೈಸಲು ಸಾಧ್ಯ ವಾಗಲಿದೆ’ ಎಂದರು.
ಸಮಿತಿ ರಚನೆ: ಕ್ಯಾಂಟೀನ್ ಆರಂಭಕ್ಕೆ ಪೂರ್ವ ಸಿದ್ಧತೆ ನಡೆಸಲು ಸಚಿವ ಜಾರ್ಜ್ ಅಧ್ಯಕ್ಷತೆಯಲ್ಲಿ 10 ಸದಸ್ಯರಿರುವ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿ ಆಹಾರ ಸಚಿವ ಯು.ಟಿ. ಖಾದರ್, ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಪದ್ಮಾವತಿ, ವಿವಿಧ ಇಲಾಖೆ ಅಧಿಕಾರಿಗಳು ಸದಸ್ಯರಾಗಿದ್ದಾರೆ.