ಬೆಂಗಳೂರು: `ಗ್ರಾಮೀಣ ಪ್ರದೇಶಗಳೂ ಸೇರಿದಂತೆ ರಾಜ್ಯದಾದ್ಯಂತ ಕನ್ನಡ ಭಾಷೆಯಲ್ಲಿ ಸರ್ಕಾರ ಉಚಿತ ಕಂಪ್ಯೂಟರ್ ತರಬೇತಿಯನ್ನು ಆರಂಭಿಸಬೇಕು~ ಎಂದು ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸರ್ಕಾರಕ್ಕೆ ಸಲಹೆ ನೀಡಿದರು.
`ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ~ವು ಭಾನುವಾರ ನಗರದಲ್ಲಿ ಆಯೋಜಿಸಿದ್ದ, ಕನ್ನಡದಲ್ಲಿ ಉದ್ಯೋಗ ಅವಲಂಬಿತ ಕಂಪ್ಯೂಟರ್ ತಂತ್ರಜ್ಞಾನ ಶಿಕ್ಷಣ ಪಡೆದವರಿಗೆ ರಾಜ್ಯಮಟ್ಟದ ತರಬೇತಿ ಪ್ರಮಾಣ ಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಈ ಕಾರ್ಯಕ್ರಮದ ಮೂಲಕ ಕನ್ನಡ ಮಾಧ್ಯಮದ ಎಲ್ಲ ವಿದ್ಯಾರ್ಥಿಗಳಿಗೂ ಕಂಪ್ಯೂಟರ್ ಶಿಕ್ಷಣ ತಲುಪಿಸುವ ಜೊತೆಗೆ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ~ ಎಂದು ಅವರು ಹೇಳಿದರು.`ಕಂಪ್ಯೂಟರ್ನ ವಿವಿಧ ಭಾಗಗಳ ಹೆಸರುಗಳನ್ನು ಇಂಗ್ಲಿಷ್ನ ಬದಲು ಕನ್ನಡದಲ್ಲಿ ಬಳಸುವ ಪ್ರಯೋಗ ಮಾಡಬೇಕಿದೆ.
ಎಲ್ಲ ಭಾಗಗಳಿಗೂ ಕನ್ನಡ ಪದಗಳನ್ನೇ ಹುಡುಕುವ ಅವಶ್ಯಕತೆಯಿಲ್ಲ. ಈ ತರಬೇತಿ ಬರೀ ತರಬೇತಿಗಷ್ಟೆ ಸೀಮಿತವಾಗದೇ ಉದ್ಯೋಗವನ್ನೂ ಸೃಷ್ಟಿಸುವಂತಿರಬೇಕು. ಸರ್ಕಾರ ಹಾಗೂ ತರಬೇತಿ ಸಂಸ್ಥೆಗಳು ಈ ನಿಟ್ಟಿನಲ್ಲಿ ಗಮನ ಹರಿಸಬೇಕು~ ಎಂದೂ ಅವರು ನುಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪ ಕಾರ್ಯದರ್ಶಿ ಕೆ.ಸುಧಾಕರಶೆಟ್ಟಿ, ಕನ್ನಡ ಗಣಕ ಉಚಿತ ತರಬೇತಿ ಕೇಂದ್ರ ಹಾಗೂ ಕನ್ನಡ ಅನುಷ್ಠಾನ ಮಂಡಳಿ ಅಧ್ಯಕ್ಷ ಆರ್.ಎ.ಪ್ರಸಾದ್ ಉಪಸ್ಥಿತರಿದ್ದರು.