ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಂದಕ್ಕಿಂತ ಹೆಚ್ಚು ಕಾಡು ಹುಲಿಗಳು ಇರುವ ಸಂಶಯ ವ್ಯಕ್ತ ವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳ ಪ್ರಕಾರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ (ಬಿಎನ್ಪಿ) ಮತ್ತು ಬನ್ನೇರು ಘಟ್ಟ ಜೈವಿಕ ಉದ್ಯಾನದಲ್ಲಿ (ಬಿಬಿಪಿ) ಒಂದಕ್ಕಿಂತ ಹೆಚ್ಚು ಹುಲಿಗಳ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ಶನಿವಾರ ಮಧ್ಯಾಹ್ನ 3.45ರ ಸುಮಾರಿಗೆ ಪ್ರವಾಸಿಗರು ಹವಾ ನಿಯಂತ್ರಿತ ಬಸ್ನಲ್ಲಿ ಸಫಾರಿ ಮುಗಿಸಿ ಕೊಂಡು ಹಿಂತಿರುಗುತ್ತಿದ್ದಾಗ ಮೂಲೆ ಗುಂಡೆ ಕೆರೆ ಸಮೀಪ (ಪ್ರಾಣಿ ರಕ್ಷಣೆ ಕೇಂದ್ರದ ಬಳಿ) ಹುಲಿಯನ್ನು ನೋಡಿ ದ್ದರು. ನಗರದಿಂದ ಉದ್ಯಾನ 37 ಕಿ.ಮೀ ದೂರದಲ್ಲಿದೆ.
ಬಿಎನ್ಪಿ ಗಡಿಗೆ ಹೊಂದಿ ಕೊಂಡಿರುವ ಸಫಾರಿ ರಸ್ತೆಯ ಸಮೀಪ ಕಾಡು ಆನೆ, ಚಿರತೆ ಸೇರಿದಂತೆ ಇತರ ಪ್ರಾಣಿಗಳು ಕಾಣಿಸಿಕೊಂಡಿದ್ದವು. ಈಗ ಇದೇ ಸ್ಥಳದಲ್ಲಿ ಕಾಡು ಹುಲಿ ಕಾಣಿಸಿ ಕೊಂಡಿದೆ. ‘ಒಂದಕ್ಕಿಂತ ಹೆಚ್ಚು ಹುಲಿಗಳು ಇರುವ ಸಾಧ್ಯತೆ ಇದೆ. ಏಕೆಂದರೆ ಮೂಲೆಗುಂಡೆ ಕೆರೆ ಮತ್ತು ಸಿಗ್ಗೆಕಟ್ಟೆ ಬಳಿ ಕಳೆದ ವಾರ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದವು’ ಎಂದು ಅವರು ತಿಳಿಸದರು.
‘ಈ ಕುರಿತು ರಾಷ್ಟ್ರೀಯ ಉದ್ಯಾನದ ಸಿಬ್ಬಂದಿ ಕಳೆದ ಆರು ತಿಂಗಳಿಂದ ನಮಗೆಲ್ಲ ಮಾಹಿತಿ ನೀಡುತ್ತಿದ್ದರು’ ಎಂದು ಬಿಬಿಪಿ ಕಾರ್ಯ ನಿರ್ವಾಹಕ ನಿರ್ದೇಶಕರಾದ ರಂಗೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರು ವರ್ಷಗಳ ಹಿಂದೆ ಬಿಎನ್ಪಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು. ಬಿಎನ್ಪಿಯಿಂದ 90 ಕಿ.ಮೀ ದೂರ ಹಾಗೂ ಅರಣ್ಯದೊಂದಿಗೆ ಸಂಪರ್ಕ ಇರುವುದರಿಂದ ಕಾವೇರಿ ವನ್ಯಜೀವಿ ಧಾಮದಿಂದ ಗಂಡು ಹುಲಿ ಬಂದಿರುವ ಸಾಧ್ಯತೆ ಇದೆ’ ಎಂದೂ ಹೇಳಿದರು.
‘ಹುಲಿ ತಜ್ಞರು ಮತ್ತು ಪ್ರಾಣಿ ಸಂಗ್ರಹಾಲಯದ ಅಧಿಕಾರಿಗಳು ಶೀಘ್ರ ದಲ್ಲೇ ಬನ್ನೇರುಘಟ್ಟಕ್ಕೆ ಭೇಟಿ ನೀಡ ಲಿದ್ದಾರೆ’ ಎಂದು ಅವರು ತಿಳಿಸಿದರು.
‘ಈಗ ಹುಲಿ ಹೆಜ್ಜೆ ಕಾಣಿಸಿ ಕೊಂಡಿರುವ ಸ್ಥಳದಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ’ ಎಂದರು. ‘ಶನಿವಾರ ಮತ್ತು ಭಾನುವಾರ ಇನ್ನಷ್ಟು ಹುಲಿ ಹೆಜ್ಜೆ ಗುರುತು ಕಾಣಿಸಿ ಕೊಂಡಿವೆ’ ಎಂದು ಉದ್ಯಾನದ ಡಿಸಿಎಫ್ ಸುನೀಲ್ ಪನ್ವಾರ್ ತಿಳಿಸಿದರು. ‘ಹುಲಿಗಳು ಬಹಳ ದೂರದವರೆಗೆ ಓಡಾಡುವುದು ಸಾಬೀತಾಗಿರುವ ಸಂಗತಿ. ಕಾವೇರಿ ವನ್ಯಜೀವಿಧಾಮ ಅಲ್ಲದೇ ಬೇರೆಡೆಯಿಂದಲೂ ಹುಲಿ ಬಂದಿರುವ ಸಾಧ್ಯತೆ ಇದೆ’ ಎಂದು ವನ್ಯಜೀವಿ ತಜ್ಞ ಉಲ್ಲಾಸ್ ಕೆ. ಕಾರಂತ ಪ್ರತಿಕ್ರಿಯಿಸಿದರು. ಚಿರತೆಯೊಂದಿಗೆ ಕಾಡು ಹುಲಿ ಈ ಉದ್ಯಾನದಲ್ಲಿ ಈಗ ಕಾಣಿಸಿಕೊಂಡಿ ರುವದರಿಂದ ಜನರಲ್ಲಿ ಭಯ ಕಾಣಿಸಿಕೊಂಡಿದೆ.
ಸಾರ್ವಜನಿಕರಿಗೆ ಸುರಕ್ಷಿತವಲ್ಲ...
ಅರಣ್ಯ ಮತ್ತು ಜನವಸತಿ ಪ್ರದೇಶದ ನಡುವೆ ಸಂರಕ್ಷಿತ ವಲಯದ ಕೊರತೆಯಿಂದ ಹುಲಿ ಮತ್ತು ಸಾರ್ವಜನಿಕರ ಸುರಕ್ಷತೆ ವಿಷಯವಾಗಿ ಆತಂಕ ಎದುರಾಗಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ (ಬಿಎನ್ಪಿ) ಸುತ್ತಲೂ ಅನೇಕ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳು ಇವೆ.
ಇವುಗಳ ಜೊತೆಗೇ ಅಪಾರ್ಟ್ ಮೆಂಟ್, ರೆಸಾರ್ಟ್ ಹಾಗೂ ಶೈಕ್ಷಣಿಕ ಸಂಸ್ಥೆಗಳು ಇವೆ. ‘ಜನರಲ್ಲಿ ಯಾವುದೇ ರೀತಿಯ ಆತಂಕ ಮೂಡಿಸ ಬಾರದು ಎನ್ನುವ ಕಾರಣಕ್ಕಾಗಿ ಹುಲಿಗಳು ಇರುವುದರ ಬಗ್ಗೆ ಸಾಕ್ಷ್ಯ ಸಿಕ್ಕಿದ್ದರೂ ಮೌನ ವಹಿಸಿದ್ದೆವು. ಈಗ ನೇರವಾಗಿ ಜನರೇ ಹುಲಿಯನ್ನು ನೋಡಿರುವುದ ರಿಂದ ಎಲ್ಲೆಡೆ ಸುದ್ದಿ ಹರಡಿದೆ’ ಎಂದು ಅರಣ್ಯ ಇಲಾಖೆಯ ಅಧಿಕಾರಿ ಯೊಬ್ಬರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.