ಬೆಂಗಳೂರು: `ಸಂಪಿಗೆ ರಸ್ತೆಯಲ್ಲಿನ ಮಂತ್ರಿ ಸ್ಕ್ವೇರ್ ಕಟ್ಟಡದ ಕಾಂಪೌಂಡ್ಅನ್ನು ಬಿಬಿಎಂಪಿ ಅಕ್ರಮವಾಗಿ ಕೆಡವಿದೆ. ಈ ತೆರವು ಕಾರ್ಯದಿಂದ ಉಂಟಾದ ನಷ್ಟಕ್ಕೆ ಪಾಲಿಕೆ 2 ಕೋಟಿ ರೂಪಾಯಿ ಹಾಗೂ ಸಂಸ್ಥೆಯ ಘನತೆಗೆ ಚ್ಯುತಿ ಉಂಟಾಗಿರುವುದಕ್ಕೆ 8 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಿಟ್ ಅರ್ಜಿ ಸಲ್ಲಿಸಲಾಗಿದೆ~ಎಂದು ಮಂತ್ರಿ ಡೆವಲಪರ್ಸ್ ಸಂಸ್ಥೆಯ ಅಧ್ಯಕ್ಷ ಸುಶೀಲ್ ಮಂತ್ರಿ ಹೇಳಿದರು.
`ಪರಿಷ್ಕೃತ ಮಹಾನಕ್ಷೆ 2012ರ (ಆರ್ಎಂಪಿ) ಪ್ರಕಾರ ಸಂಪಿಗೆ ರಸ್ತೆ ವಿಸ್ತರಿಸುವ ಪ್ರಸ್ತಾವವಿಲ್ಲ. ಆದರೆ ಜನರ ಅನುಕೂಲಕ್ಕಾಗಿ ವಿಸ್ತರಣೆ ಕಾರ್ಯಕ್ಕೆ ಅಗತ್ಯ ಭೂಮಿ ಬಿಟ್ಟುಕೊಡುವುದಾಗಿ ಭರವಸೆ ನೀಡಿದ್ದೆವು. ಹಾಗಿದ್ದರೂ ಯಾವುದೇ ಮಾಹಿತಿ ನೀಡದೇ ಪಾಲಿಕೆ ಕಾಂಪೌಂಡ್ ಕೆಡವಿದೆ~ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
`ಮೇ 31ರ ಪಾಲಿಕೆ ಸಭೆಯಲ್ಲಿ ಮಂತ್ರಿ ಸ್ಕ್ವೇರ್ ಕಟ್ಟಡದ ಕಾಂಪೌಂಡ್ ತೆರವುಗೊಳಿಸುವುದಾಗಿ ಆಯುಕ್ತ ಸಿದ್ದಯ್ಯ ತಿಳಿಸಿದ ಬಗ್ಗೆ ಮಾಹಿತಿ ಲಭ್ಯವಾಯಿತು. ಆ ನಂತರ ಕಾಂಪೌಂಡ್ ತೆರವುಗೊಳಿಸಲು ಕಾಲಾವಕಾಶ ನೀಡುವಂತೆ ಪ್ರಮಾಣ ಪತ್ರ ಸಲ್ಲಿಸುವುದಾಗಿ ಪ್ರಧಾನ ಎಂಜಿನಿಯರ್ ಬಿ.ಟಿ. ರಮೇಶ್ ಅವರನ್ನು ಸಂಸ್ಥೆ ಕೋರಿತು~ ಎಂದರು.
`ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಅವರು, ಜೂನ್ 1ರಂದು ಬೆಳಿಗ್ಗೆ 9 ಗಂಟೆಗೆ ತಮ್ಮನ್ನು ಭೇಟಿಯಾಗುವಂತೆ ಸೂಚಿಸಿದರು. ಆದರೆ ಜೂನ್ 1ರ ಮುಂಜಾನೆ 6.45ಕ್ಕೆ ತೆರವು ಕಾರ್ಯ ಆರಂಭಿಸಿದರು. ಈ ಸಂಬಂಧ ನೋಟಿಸ್ ಸಹ ನೀಡಿರಲಿಲ್ಲ~ ಎಂದು ಹೇಳಿದರು.
`ಸಂಪಿಗೆ ರಸ್ತೆ ವಿಸ್ತರಣೆಗೆ ಅಗತ್ಯವಾದ ನಾಲ್ಕು ಮೀಟರ್ ಸ್ಥಳವನ್ನು ಯಾವುದೇ ಸಂದರ್ಭದಲ್ಲಿ ಬಿಟ್ಟುಕೊಡುವುದಾಗಿ ಮೇ 10ರಂದೇ ಪಾಲಿಕೆಗೆ ಲಿಖಿತ ಭರವಸೆ ನೀಡಲಾಗಿತ್ತು. ಹಾಗಿದ್ದರೂ ಜೂನ್ 1ರಂದು ಏಕಾಏಕಿ ಕಾಂಪೌಂಡ್ ಕೆಡವಿರುವುದರ ಹಿಂದೆ ಬೇರೆ ಉದ್ದೇಶವಿರುವ ಅನುಮಾನ ಮೂಡುತ್ತಿದೆ~ ಎಂದು ತಿಳಿಸಿದರು.
`ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕ ಎಂ.ನಾಗರಾಜ್ ಅವರು ಕಟ್ಟಡ ನಿರ್ಮಾಣದಲ್ಲಿ ನಿಯಮ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಸಂಸ್ಥೆಗೆ ನೋಟಿಸ್ ನೀಡುವಂತೆ ನಾಗರಾಜ್ ಅವರು ಒತ್ತಡ ಹೇರದಿರಲು ಕಾರಣವೇನು~ ಎಂದು ಪ್ರಶ್ನಿಸಿದರು.
`ನಿಯಮಬದ್ಧವಾಗಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ಪಾಲಿಕೆ ಸದಸ್ಯರು ಅಗತ್ಯವಾಗಿ ಕಿರುಕುಳ ನೀಡುತ್ತಿದ್ದಾರೆ. ನಾವು ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿಲ್ಲ. ಇಷ್ಟಾದರೂ ಸಂಸ್ಥೆಯ ಪ್ರತಿಷ್ಠೆಗೆ ಕಳಂಕ ತರುತ್ತಿದ್ದಾರೆ~ ಎಂದು ಸುಶೀಲ್ ಮಂತ್ರಿ ಅವರು ಆರೋಪಿಸಿದರು.
`ಪಾಲಿಕೆ ಸದಸ್ಯರ ಕಿರುಕುಳ~
ಬಿಬಿಎಂಪಿಗೆ ಜನಪ್ರತಿನಿಧಿಗಳು ಆಯ್ಕೆಯಾದ ಬಳಿಕ ಡೆವಲಪರ್ಗಳಿಗೆ ಸದಸ್ಯರ ಕಿರುಕುಳ ಹೆಚ್ಚಾಗಿದೆ ಎಂದು ಭಾರತೀಯ ರಿಯಲ್ ಎಸ್ಟೇಟ್ ಡೆವಲಪರ್ ಸಂಸ್ಥೆಗಳ ಒಕ್ಕೂಟ (ಸಿಆರ್ಇಡಿಎಐ- ಕ್ರೆಡೈ) ಆರೋಪಿಸಿದೆ.
ನಗರದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಮಾಜಿ ಅಧ್ಯಕ್ಷ ಬಾಲಕೃಷ್ಣ ಹೆಗ್ಡೆ, `ಪಾಲಿಕೆ ಕೆಲ ಸದಸ್ಯರು ದೌರ್ಜನ್ಯ ನಡೆಸುತ್ತಿದ್ದಾರೆ. `ಕ್ರೆಡೈ~ನ ಸದಸ್ಯರು ನಿಯಮಬದ್ಧವಾಗಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಿದ್ದರೂ ಅನಗತ್ಯ ದಾಖಲೆಗಳನ್ನು ಪ್ರದರ್ಶಿಸಿ ತೊಂದರೆ ನೀಡುತ್ತಿದ್ದಾರೆ~ ಎಂದರು.
`ಅಪಾರ್ಟ್ಮೆಂಟ್, ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟಂತೆ 54 ನಿರಪೇಕ್ಷಣಾ ಪತ್ರ (ಎನ್ಒಸಿ) ಪಡೆಯಬೇಕು. ಆದರೆ, ಅಡ್ಡಿಪಡಿಸುವ ಪ್ರಯತ್ನಗಳು ನಡೆಯುತ್ತವೆ. ಇದರಿಂದ ಉದ್ಯಮದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಇದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಗಂಭೀರ ಚಿಂತನೆ ನಡೆದಿದೆ~ ಎಂದರು.
ಒಕ್ಕೂಟದ ಕರ್ನಾಟಕ ಘಟಕದ ಅಧ್ಯಕ್ಷ ಸುಶೀಲ್ ಮಂತ್ರಿ, ಕಾರ್ಯದರ್ಶಿ ಶಂಕರ ಶಾಸ್ತ್ರಿ, ಜಂಟಿ ಕಾರ್ಯದರ್ಶಿ ಫೈಸಲ್ ರಿಜ್ವಿ, ಉಪಾಧ್ಯಕ್ಷ ಸಿ.ಎನ್. ಗೋವಿಂದರಾಜು ಹಾರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.