ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘವು ಸೋಮವಾರ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದ ಕಿರು ನಾಟಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ರಾಜ್ಯದ ಎಲ್ಲ ಜನಪದ ಕಲೆಗಳನ್ನು ಒಗ್ಗೂಡಿಸಿ ಉಳಿಸುವ ಕೆಲಸವಾಗಬೇಕಿದೆ. ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ~ ಎಂದರು. `ರಂಗಭೂಮಿಯನ್ನು ಉಳಿಸಿಕೊಂಡು ನಮ್ಮ ಮುಂದಿನ ಪೀಳಿಗೆವರೆಗೂ ವರ್ಗಾಯಿಸುವ ಅಗತ್ಯವಿದೆ. ಇದಕ್ಕಾಗಿ ಸಾಂಸ್ಕೃತಿಕವಾದ ಗಟ್ಟಿ ಅಡಿಪಾಯವನ್ನು ಹಾಕಬೇಕು. ದೇಶ, ನಾಡು, ನುಡಿಯ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸಬೇಕು~ ಎಂದು ಹೇಳಿದರು.
`ನಮ್ಮ ಸಮಾಜದಲ್ಲಿ ಸಾಂಸ್ಕೃತಿಕ ಸಾಮರಸ್ಯವನ್ನು ಬೆಳಸುವ ಕೆಲಸವನ್ನು ನಾಟಕಗಳು ಮಾಡಬೇಕು. ಒಂದು ಮೌಲ್ಯವನ್ನು ಪ್ರತಿಪಾದಿಸಬೇಕು. ಮನಸ್ಸಿಗೆ ಹತ್ತಿರವಾಗಿ ಮನಸ್ಸನ್ನು ತಟ್ಟುವಂತಹ ಕಾರ್ಯವನ್ನು ಇಂದಿನ ನಾಟಕಗಳು ಮಾಡಬೇಕು. ಅಂತಹ ನಾಟಕಗಳ ರಚನೆ ಮತ್ತು ಪ್ರದರ್ಶನ ಇಂದಿನ ಅಗತ್ಯವಾಗಿದೆ~ ಎಂದು ಹೇಳಿದರು.
`ಹಳ್ಳಿಗಳಲ್ಲಿ ಮಾತ್ರ ನಾಟಕಗಳು ಜೀವಂತವಾಗಿವೆ. ನಗರದಲ್ಲಿ ನಾಟಕಗಳ ಬಗ್ಗೆ ಆಸಕ್ತಿ ಕಡಿಮೆಯಿದೆ. ಏಕೆಂದರೆ, ಇಲ್ಲಿ ಟಿ.ವಿ. ಮತ್ತು ಧಾರಾವಾಹಿಗಳ ಆಸಕ್ತಿಯೇ ಹೆಚ್ಚು ಕಂಡುಬರುತ್ತದೆ. ಪ್ರೇಕ್ಷಕರು ನಾಟಕಗಳ ಬಗ್ಗೆ ಆಸಕ್ತಿ ವಹಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು~ ಎಂದರು.
`ನಾಟಕಗಳು ಒಂದೊಂದು ರೀತಿಯ ಪ್ರಭಾವವನ್ನು ಬೀರುತ್ತವೆ. ಐತಿಹಾಸಿಕ ನಾಟಕಗಳು ನಮ್ಮ ಇತಿಹಾಸವನ್ನು ನೆನಪಿಸಿದರೆ, ಪೌರಾಣಿಕ ನಾಟಕಗಳು ಮರೆತು ಹೋಗುತ್ತಿರುವ ಪುರಾಣದ ಕಥೆಗಳನ್ನು ನೆನಪಿಸುತ್ತವೆ. ಕೆಲವೊಂದು ಸಾಮಾಜಿಕ ನಾಟಕಗಳು ನಮ್ಮ ಸಮಾಜವನ್ನೇ ಬದಲಿಸಿದ ಉದಾಹರಣೆಗಳಿವೆ~ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪತ್ರಾಂಕಿತ ವ್ಯವಸ್ಥಾಪಕ ಮಹಾದೇವಯ್ಯ, ಸಮಾಜ ಸೇವಕರಾದ ಕೆ.ಬಾಗೇಗೌಡ, ಕೆ.ಸಿ.ಬೆಟ್ಟಸ್ವಾಮಿಗೌಡ ಮತ್ತಿತರರು ಉಪಸ್ಥಿತರಿದ್ದರು.