ಬೆಂಗಳೂರು: ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ತಲುಪಲು ಸಾಧ್ಯವಾಗುವಂತೆ 155 ಕಿ.ಮೀ ಉದ್ದದ ನಾಲ್ಕು ಪಥದ ನಾಲ್ಕು ರಸ್ತೆಗಳ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ (ಕೆಆರ್ಡಿಸಿಎಲ್) ಯೋಜನೆ ಸಿದ್ಧಪಡಿಸಿದೆ.
ನೆಲಮಂಗಲ– ದೇವನಹಳ್ಳಿ, ಹಾರೋಹಳ್ಳಿ– ಆನೇಕಲ್, ಆನೇಕಲ್– ಹೊಸಕೋಟೆ ಹಾಗೂ ಹೊಸಕೋಟೆ– ದೇವನಹಳ್ಳಿ ಸಂಪರ್ಕಿಸುವ ನಾಲ್ಕು ಪಥದ ರಸ್ತೆಗಳು ನಿರ್ಮಾಣ ಆಗಲಿವೆ.
ಅಂದಾಜು ₹ 2,040 ಕೋಟಿಯ ಯೋಜನೆ ಇದಾಗಿದೆ. ಪ್ರತಿ ರಸ್ತೆಯಲ್ಲಿ ತಲಾ ಒಂದೊಂದು ಟೋಲ್ ಪ್ಲಾಜಾಗಳು ನಿರ್ಮಾಣ ಆಗಲಿವೆ. ಈಗಾಗಲೇ ಇರುವ ಸಣ್ಣ ರಸ್ತೆಗಳನ್ನು ನಾಲ್ಕು ಪಥದ ರಸ್ತೆಗಳಾಗಿ ಪರಿವರ್ತಿಸಲಾಗುವುದು, ಅಗತ್ಯ ಇರುವ ಕಡೆ ಭೂಸ್ವಾಧೀನ ಮಾಡಿಕೊಳ್ಳಲಾಗುವುದು ಎಂದು ಕೆಆರ್ಡಿಸಿಎಲ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸಂಪುಟ ಸಭೆಯ ಮುಂದೆ ಸದ್ಯದಲ್ಲೇ ಪ್ರಸ್ತಾವ ಹೋಗಲಿದ್ದು, ಅನುಮತಿ ದೊರೆತ ಬಳಿಕ ಸರ್ವೆ ಕಾರ್ಯ ಆರಂಭವಾಗಲಿದೆ. ಆನಂತರ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಯೋಜನೆ ಪೂರ್ಣಗೊಂಡರೆ ಬೆಂಗಳೂರಿನ ಸುತ್ತ ಮತ್ತೊಂದು ವರ್ತುಲ ರಸ್ತೆ ನಿರ್ಮಾಣ ಆದಂತಾಗಲಿದೆ.
ಹಾಸನ, ಮಂಗಳೂರು, ಮೈಸೂರು, ಕನಕಪುರ, ಬನ್ನೇರುಘಟ್ಟ, ಹೊಸೂರು ಮತ್ತು ಹೊಸಕೋಟೆ ಕಡೆಯಿಂದ ಬರುವ ವಿಮಾನ ಪ್ರಯಾಣಿಕರು ನೇರ
ವಾಗಿ ವಿಮಾನ ನಿಲ್ದಾಣಕ್ಕೆ ತೆರಳಬಹುದಾಗಿದೆ. ಇದರಿಂದ ನಗರದಲ್ಲಿ ವಾಹನಗಳ ಒತ್ತಡ ಕಡಿಮೆ ಆಗಲಿದೆ.