ಬೆಂಗಳೂರು : `ರಾಜ್ಯ ಸರ್ಕಾರ ಅಭಿವೃದ್ಧಿಯ ಹೆಸರಿನಲ್ಲಿ ಎಫ್ಕೆಸಿಸಿಐ ಜತೆ ಸೇರಿ ಸರ್ಕಾರವು ಮಡಿಕೇರಿಯಲ್ಲಿ (ಡಿ.18) ಸೋಮವಾರ ನಡೆಸಲು ಉದ್ದೇಶಿಸಿರುವ ಕೊಡಗು ಹೂಡಿಕೆದಾರರ ಸಮಾವೇಶವನ್ನು ಕೂಡಲೇ ರದ್ದು ಪಡಿಸಬೇಕು' ಎಂದು ಕೊಡಗು ವನ್ಯಜೀವಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಕರ್ನಲ್ ಸಿ.ಪಿ. ಮುತ್ತಣ್ಣ ಸರ್ಕಾರವನ್ನು ಒತ್ತಾಯಿಸಿದರು.
ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸಮಾವೇಶದಿಂದ ಕೊಡಗಿನ ಪ್ರಾಕೃತಿಕ ಸಂಪನ್ಮೂಲಗಳಿಗೆ ದಕ್ಕೆಯಾಗಲಿದೆ. 850 ಕೋಟಿಗೂ ಅಧಿಕ ಯೋಜನೆಗಳು ಸಮಾವೇಶದಲ್ಲಿ ಸಹಿ ಬಿಳಲಿದೆ. ಯಾವುದೇ ಪೂರ್ವ ತಯಾರಿ ನಡೆಸದೇ ಇರುವುದರಿಂದ ಸಮಾವೇಶವನ್ನು ರದ್ದುಗೊಳಿಸುವುದು ಉತ್ತಮವಾಗಿದೆ' ಎಂದರು.
`ಮಂಡ್ಯದ ರೈತ ಮುಖಂಡ ಮಾದೇಗೌಡ ಅವರು ಈಗಾಗಲೇ ಸಮಾವೇಶವನ್ನು ರದ್ದು ಪಡಿಸಲು ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಈ ಬಗ್ಗೆ ಯಾವುದೇ ಕ್ರಮವನ್ನು ಕೈಗೊಳ್ಳದೇ ರೆಸಾರ್ಟ್ಗಳನ್ನು ಸ್ಥಾಪಿಸಲು ಅನುಮತಿ ಕೊಡಲು ಹೊರಟಿರುವುದು ಕೊಡಗಿನ ಪಾವಿತ್ರ್ಯತೆಯನ್ನು ಕಳೆದುಹೊಗಲಿದೆ' ಎಂದರು.
`ಊಟಿ, ಶಿಮ್ಲಾ ಸೇರಿದಂತೆ ಮತ್ತಿತರ ಪ್ರವಾಸಿ ಕೇಂದ್ರಗಳು ಹಿಂದೊಮ್ಮ ಪ್ರಕೃತಿ ಸೌಂದರ್ಯದ ತಾಣಗಳಾಗಿದ್ದವು. ಈಗ ಪ್ರವಾಸೋದ್ಯಮದ ನೀತಿಯಿಂದ ಮೂಲ ಸ್ವರೂಪವನ್ನು ಕಳೆದುಕೊಂಡು ಕಂಗೆಟ್ಟಿವೆ. ಕಾವೇರಿ ಹೋರಾಟದ ಮೂಲ ಸ್ವರೂಪವನ್ನು ರಕ್ಷಿಸಲು ಸರ್ಕಾರ ಅಗತ್ಯ ಸೌಕರ್ಯಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದರು.