ಬೆಂಗಳೂರು: ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮತ್ತು ಸ್ಥಾನೀಯ ಶಿಕ್ಷಣ ಸಂಸ್ಥೆಯ ಆಯೋಗವು ರಾಷ್ಟ್ರೀಯ ಅಲ್ಪಸಂಖ್ಯಾತ ಶಿಕ್ಷಣ ಆಯೋಗದಿಂದ ಪಡೆದಿರುವ ಮಾನ್ಯತಾ ಪ್ರಮಾಣ ಪತ್ರಗಳನ್ನು ಬುಧವಾರ ಹೈಕೋರ್ಟ್ಗೆ ಸಲ್ಲಿಸಿವೆ.
ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಈ ಕುರಿತ ವಿವರ ಸಲ್ಲಿಸಲಾಗಿದೆ.
ಮತೀಯ ಅಲ್ಪಸಂಖ್ಯಾತ ಶಾಲೆಗಳಲ್ಲಿ ಆಯಾ ಧಾರ್ಮಿಕ ಸಮುದಾಯದ ವಿದ್ಯಾರ್ಥಿಗಳು ಇಂತಿಷ್ಟೇ ಸಂಖ್ಯೆಯಲ್ಲಿ ಇರಬೇಕೆಂಬ ಮೀಸಲು ಪಾಲನೆಯ ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಇದಾಗಿದೆ. ಮತೀಯ ಅಲ್ಪಸಂಖ್ಯಾತ ಶಾಲೆಗಳಲ್ಲಿ ಶೇಕಡ 25ರಷ್ಟು ವಿದ್ಯಾರ್ಥಿಗಳು ಇರಬೇಕು ಎಂಬ ಅಧಿಸೂಚನೆಯನ್ನು ಈ ಸಂಸ್ಥೆಗಳು ಪ್ರಶ್ನಿಸಿವೆ.
ವಿದ್ಯಾರ್ಥಿಗಳ ಹಾಜರಿ ವಿವರ ಸಲ್ಲಿಕೆ
ಬೆಂಗಳೂರು: ಹಾಜರಿ ಕೊರತೆ ಇರುವ ಕಾರಣ ಪ್ರವೇಶ ಪತ್ರ (ಹಾಲ್ಟಿಕೆಟ್) ನಿರಾಕರಿಸಲಾಗಿದೆ. ಆದ್ದರಿಂದ ನಮಗೆಲ್ಲಾ ದ್ವಿತೀಯ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದ ಕೆಂಪಾಪುರ ಬಳಿಯ ಸಿಂಧಿ ಕಾಲೇಜಿನ 14 ವಿದ್ಯಾರ್ಥಿಗಳ ಹಾಜರಾತಿ ಪ್ರಮಾಣ ಶೇಕಡ 35ರಿಂದ 40ರಷ್ಟಿದೆ ಎಂದು ಶಿಕ್ಷಣ ಇಲಾಖೆ ಹೈಕೋರ್ಟ್ಗೆ ತಿಳಿಸಿದೆ.
ಈ ಕುರಿತ ವಿವರಗಳನ್ನು ಸರ್ಕಾರಿ ವಕೀಲರು ಬುಧವಾರ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ಏಕಸದಸ್ಯ ಪೀಠಕ್ಕೆ ಸಲ್ಲಿಸಿದರು.
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಇದೇ ನ್ಯಾಯಪೀಠವು ಮಾ.16ರಂದು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಮಧ್ಯಾಂತರ ಆದೇಶ ನೀಡಿತ್ತು. ಫಲಿತಾಂಶ ಅಂತಿಮ ಆದೇಶಕ್ಕೆ ಬದ್ಧವಾಗಿರತಕ್ಕದ್ದು ಎಂದೂ ಕೋರ್ಟ್ ಹೇಳಿತ್ತು.