ಬೆಂಗಳೂರು: ಡಾ.ಬಿ.ಆರ್. ಅಂಬೇಡ್ಕರ್ ಅನುಯಾಯಿಗಳು ಜಾತಿ ಜನಗಣತಿ ವೇಳೆ ಧರ್ಮದ ಕಾಲಂನಲ್ಲಿ ‘ಬೌದ್ಧ’ ಎಂದು ದಾಖಲಿಸುವಂತೆ ಬೌದ್ಧ ಸಂಘಟನೆಗಳ ಒಕ್ಕೂಟ ವಿನಂತಿಸಿದೆ.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸದಸ್ಯ ಎಂ.ವೆಂಕಟಸ್ವಾಮಿ ಅವರು ‘ಬೌದ್ಧ ಧರ್ಮ ಎಂದು ನಮೂದಿಸುವುದರಿಂದ ಹಿಂದೂ ಧರ್ಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಅನುಭವಿಸುತ್ತಿರುವ ಅಸ್ಪೃಶ್ಯತೆಯ ವೇದನೆಗೆ ಮುಕ್ತಿ ಸಿಗುತ್ತದೆ’ ಎಂದು ಅಭಿಪ್ರಾಯಪಟ್ಟರು.
ದಲಿತ ಸಂಘರ್ಷ ಸಮಿತಿಯ (ಭೀಮವಾದ) ಸಂಚಾಲಕ ಆರ್.ಮೋಹನ್ರಾಜ್ ಮಾತನಾಡಿ, ‘ಹಿಂದೂ ಧರ್ಮದಲ್ಲಿ ದಲಿತರನ್ನು ಇಂದಿಗೂ ಅಸ್ಪೃಶ್ಯರಂತೆ ಕಾಣಲಾಗುತ್ತಿದೆ. ಅಂಬೇಡ್ಕರ್ ಅವರು ಜಾತಿ ತಾರತಮ್ಯದಿಂದ ನೊಂದು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿದ್ದರು. ಹಾಗೆಯೇ, ಇಂದಿನ ದಲಿತರು ಸಹ ಬೌದ್ಧ ಧರ್ಮಕ್ಕೆ ಮತಾಂತರಗೊಂಡು ಜಾತಿ ಜನಗಣತಿ ವೇಳೆಯಲ್ಲಿ ಬೌದ್ಧರೆಂದು ನಮೂದಿಸಬೇಕು’ ಎಂದು ಮನವಿ ಮಾಡಿದರು.