ಬೆಂಗಳೂರು: ರಾಷ್ಟ್ರೀಯ ಭೂದಾಖಲೆಗಳ ಆಧುನೀಕರಣ ಯೋಜನೆ ಅಡಿಯಲ್ಲಿ ರಾಜ್ಯದ 14 ಜಿಲ್ಲೆಗಳ ತಲಾ ಎರಡು ಗ್ರಾಮಗಳಲ್ಲಿ ನಡೆಯುತ್ತಿರುವ ಪ್ರಾಯೋಗಿಕ ಮರುಭೂಮಾಪನ ಕಾರ್ಯವನ್ನು ಎರಡು ವರ್ಷಗಳಲ್ಲಿ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ವಿಧಾನಪರಿಷತ್ತಿನಲ್ಲಿ ಬುಧವಾರ ಹೇಳಿದರು.
ರಾಜ್ಯದಲ್ಲಿ ನಡೆಸಲಾಗಿರುವ ಭೂಸರ್ವೆ ಕುರಿತಂತೆ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ನ ಜಯಮಾಲಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘ಬ್ರಿಟಿಷರು ತಮ್ಮ ಆಡಳಿತಾತ್ಮಕ ವ್ಯಾಪ್ತಿಯಲ್ಲಿ 1818ರಿಂದ 1919ರ ನಡುವೆ ವಿವಿಧ ಪ್ರಾದೇಶಿಕ ಪ್ರಾಂತ್ಯಗಳಲ್ಲಿ ಭೂಸರ್ವೆ ನಡೆಸಿದ್ದರು. ಅದರ ನಂತರ ಸರ್ವೆಕಾರ್ಯ ನಡೆದಿಲ್ಲ’ ಎಂದರು.
ಕರ್ನಾಟಕ ಭೂ ಕಂದಾಯ ಕಾಯ್ದೆ–1964ರ ಪ್ರಕಾರ 30 ವರ್ಷಗಳಿಗೊಮ್ಮೆ ಭೂಮಿಯ ಸರ್ವೆ ನಡೆಸಬಹುದು. 1965ರಲ್ಲಿ ರಾಜ್ಯದಾದ್ಯಂತ 2ನೇ ಪುನರ್ವಿಂಗಡಣೆ ಸರ್ವೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. 2013–14ರ ಸಾಲಿನಲ್ಲಿ ರಾಷ್ಟ್ರೀಯ ಭೂದಾಖಲೆಗಳ ಯೋಜನೆ ಅಡಿಯಲ್ಲಿ ರಾಜ್ಯದ 14 ಜಿಲ್ಲೆಗಳ 27 ಗ್ರಾಮಗಳಲ್ಲಿ ಭೂಸರ್ವೆ ನಡೆಸಲಾಗುತ್ತಿದೆ. ಯೋಜನಾ ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ, 50–50ರ ಅನುಪಾತದಲ್ಲಿ ಭರಿಸುತ್ತಿದ್ದು ಎರಡು ಖಾಸಗಿ ಸಂಸ್ಥೆಗಳು ಸರ್ವೆ ಕಾರ್ಯದಲ್ಲಿ ನಿರತವಾಗಿವೆ ಎಂದು ಹೇಳಿದರು.
ಜಂಟಿ ಸರ್ವೆ: ರಾಜ್ಯದಲ್ಲಿ ಅರಣ್ಯ ಭೂಮಿ ಮತ್ತು ಕಂದಾಯ ಭೂಮಿಯನ್ನು ಇನ್ನೂ ಪ್ರತ್ಯೇಕಿಸಲಾಗಿಲ್ಲ ಎಂದ ಸಚಿವರು, ಪ್ರಾಯೋಗಿಕವಾಗಿ ಜಂಟಿ ಸರ್ವೆ ನಡೆಸಲು ಮೇ 15ರಂದು ಅರಣ್ಯ ಇಲಾಖೆ ಆದೇಶ ಹೊರಡಿದ್ದು, ಚಾಮರಾಜನಗರದಲ್ಲಿ ಈ ಕಾರ್ಯ ಆರಂಭವಾಗಿದೆ’ ಎಂದರು.