ತಲಘಟ್ಟಪುರ: ಹಿಂದೂಗಳ ಜೊತೆ ಸೇರಿಕೊಂಡು ಕನಕಪುರ ರಸ್ತೆಯ ಕಗ್ಗಲೀಪುರ ಮತ್ತು ಬನಶಂಕರಿ ಬಳಿ ರಾಮ ನವಮಿ ಆಚರಿಸಿದ ನೂರಾರು ಮುಸಲ್ಮಾನ ಯುವಕರು ಧಾರ್ಮಿಕ ಸೌಹಾರ್ದತೆಗೆ ಮಾದರಿಯಾಗಿದ್ದಾರೆ.
ಹಿಂದೂ-ಮುಸಲ್ಮಾನರೆಲ್ಲೂ ಒಂದೇ, ಪ್ರೀತಿ ವಿಶ್ವಾಸ ನೆಮ್ಮದಿಯಿಂದ ಬದುಕಲು ಹಬ್ಬ ಹರಿದಿನಗಳು ಶಾಂತಿಯ ಸಂಕೇತವಾಗಿವೆ ಎಂದು ಕೆಪಿಸಿಸಿ ಅಲ್ಪ ಸಂಖ್ಯಾತರ ವಿಭಾಗದ ಕಾರ್ಯದರ್ಶಿ ಎಸ್.ಅನ್ವರ್ಪಾಷಾ ಅಭಿಪ್ರಾಯಪಟ್ಟರು.
ಸ್ಥಳೀಯ ಮುಖಂಡ ವೆಂಕಟೇಶ್ ಮಾತನಾಡಿ, ‘ಜಾತಿಬೇಧ ಭಾವನೆ ಬಿಟ್ಟು ಎರಡು ಜನಾಂಗದವರು ಒಟ್ಟಾಗಿ, ಗಣೇಶನ ಉತ್ಸವ, ರಾಜ್ಯೋತ್ಸವ, ರಾಮನವಮಿ ಆಚರಿಸಿ ಸೋದರತ್ವವನ್ನು ಮೆರೆಯುತ್ತೇವೆ ಎಂದು ಹೇಳಿದರು.
ಕಗ್ಗಲೀಪುರ ಗ್ರಾ.ಪಂ. ಉಪಾಧ್ಯಕ್ಷ ಪರ್ವಿಜ್ ಅಹಮದ್, ಅನ್ವರ್ಪಾಷಾ ,ಅಬ್ದುಲ್, ಆಸೀಪ್, ನಾಗರಾಜು, ಮೂರ್ತಿ, ರಾಮಣ್ಣ, ತಾ.ಪಂ. ಮಾಜಿ ಉಪಾಧ್ಯಕ್ಷ ಅಶ್ವತ್ ನಾಯಕ, ಷಣ್ಮುಖ ಮತ್ತಿತರರು ಹಾಜರಿದ್ದರು.
ಹಿಂದೂ-ಮುಸಲ್ಮಾನ ಯುವಕರು ಜೊತೆಗೂಡಿ 20 ಸಾವಿರ ಜನರಿಗೆ ಮಜ್ಜಿಗೆ, ಬೆಲ್ಲದ ಪಾನಕ, ಕೋಸಂಬರಿ ವಿತರಣೆ ಮಾಡಿದರು.