ಬೆಂಗಳೂರು: `ನಕಲಿ ಸಿಡಿ ದಂಧೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ರಾಜ್ಯದಲ್ಲಿ ಗೂಂಡಾ ಕಾಯ್ದೆ ಜಾರಿಗೆ ತರಬೇಕು~ ಎಂದು ಕರ್ನಾಟಕ ಆಡಿಯೋ ಮತ್ತು ವಿಡಿಯೋ ಮಾಲೀಕರ ಸಂಘದ ಅಧ್ಯಕ್ಷ ಲಹರಿ ವೇಲು ಒತ್ತಾಯಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಇನ್ನೂರು ಮುನ್ನೂರು ಕೋಟಿ ಹಣವನ್ನು ಖರ್ಚು ಮಾಡಿ ಚಲನಚಿತ್ರ ತಯಾರಿಸುವ ನಿರ್ಮಾಪಕನಿಗೆ ಇದರಿಂದ ಭಾರಿ ನಷ್ಟವಾಗಿದೆ. ನಮ್ಮಳಗಿನವರಿಂದಲೇ ಮೋಸವಾಗುತ್ತಿದೆ. ಮಾಸ್ಟರ್ ಡಿವಿಡಿಯನ್ನೇ ನಕಲಿ ಮಾಡಿ ಬಿಡುಗಡೆ ಮಾಡಲಾಗುತ್ತಿದೆ~ ಎಂದರು.
`ನಕಲಿ ಸಿಡಿ ದಂಧೆದಾರರಿಂದ ಸಿನಿಮಾ ಉದ್ಯಮಕ್ಕೆ ಸುಮಾರು 600 ಕೋಟಿ ರೂಪಾಯಿ ನಷ್ಟವಾಗಿದೆ~ ಎಂದು ಹೇಳಿದರು.`ನಕಲಿ ಸಿಡಿ ಮಾಡುವವರನ್ನು ಬಂಧಿಸಲಾಗಿತ್ತು. ಆದರೆ, ಅವರು ಒಂದೇ ದಿನದಲ್ಲಿ ಜಾಮೀನು ಮೇಲೆ ಹೊರಬಂದರು. ಅವರ ಒಂದು ವ್ಯವಸ್ಥಿತ ಜಾಲವೇ ನಿರ್ಮಾಣಗೊಂಡಿದೆ~ ಎಂದರು.
`ಖಾಸಗಿ ಎಫ್ಎಂ ಚಾನೆಲ್ಗಳಲ್ಲಿ ಕನ್ನಡದ ಹಾಡುಗಳು ಹೆಚ್ಚು ಪ್ರಸಾರವಾಗುತ್ತಿಲ್ಲ. ಇದರಿಂದ ಕನ್ನಡದ ಸಿನಿಮಾ ಹಾಡುಗಳ ಜನಪ್ರಿಯತೆ ಕುಗ್ಗಿದೆ. ಹಿಂದಿ ಮತ್ತು ಇಂಗ್ಲಿಷ್ ಹಾಡುಗಳು ಹೆಚ್ಚಾಗಿ ಪ್ರಸಾರವಾಗುತ್ತಿವೆ. ಆದರೆ, ಪ್ರಾದೇಶಿಕ ಭಾಷೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಬೇಕೆಂದು ಸರ್ಕಾರದ ನೀತಿಯೇ ಇರುವಾಗ ಅದನ್ನು ಒಪ್ಪಿಕೊಳ್ಳದೆ ತಮ್ಮದೇ ರಾಜ್ಯ ಭಾರ ಮಾಡುತ್ತಿರುವ ಎಫ್ಎಂ ಚಾನೆಲ್ಗಳನ್ನು ನಿಯಂತ್ರಿಸಬೇಕು~ ಎಂದು ಒತ್ತಾಯಿಸಿದರು.
`ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ತಾಲ್ಲೂಕಿನಲ್ಲಿ ನಕಲಿ ಸಿಡಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ, ನಕಲಿ ಸಿಡಿಗಳನ್ನು ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಲಾಗುವುದು~ ಎಂದರು.