ಬೆಂಗಳೂರು: ‘ನರ್ಸಿಂಗ್ನಲ್ಲಿ ಪದವಿ ಪಡೆದಿದ್ದಕ್ಕೆ ಖುಷಿಯಾಗುತ್ತಿದೆ. ಉನ್ನತ ಅಧ್ಯಯನ ಕೈಗೊಳ್ಳುವುದರ ಜತೆಗೆ ಬಡವರಿಗೆ ಸೇವೆ ಮಾಡಬೇಕು ಎಂಬುದು ನನ್ನ ಉದ್ದೇಶ’
–ಇದು ಎಂ.ಎಸ್.ರಾಮಯ್ಯ ನರ್ಸಿಂಗ್ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಬಿಎಸ್ಸಿ ನರ್ಸಿಂಗ್ ಪದವಿ ಪಡೆದ ಎಸ್.ಪ್ರೇಮಾ ಅವರ ಸಂಭ್ರಮದ ನುಡಿ.
‘ನಾನು ಎಂಬಿಬಿಎಸ್ ಮಾಡಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಹೀಗಾಗಿ ನರ್ಸಿಂಗ್ ವಿಷಯವನ್ನು ಆಯ್ಕೆ ಮಾಡಿಕೊಂಡೆ. ಈ ಕ್ಷೇತ್ರದಲ್ಲಿ ಸೇವೆ ಮಾಡಿ ತೃಪ್ತಿ ಪಡುತ್ತೇನೆ’ ಎಂದರು.
‘ಬಡವರ ಸೇವೆಗೆ ನರ್ಸಿಂಗ್ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳಿವೆ’ ಎನ್ನುತ್ತಾರೆ ಮತ್ತೊಬ್ಬ ವಿದ್ಯಾರ್ಥಿನಿ ಜೀತು .
ವಿದ್ಯಾರ್ಥಿನಿ ಶಮಾ ಇಕ್ಬಾಲ್, ‘ಕಾಲೇಜಿನಲ್ಲಿ ಆಸ್ಪತ್ರೆಯೂ ಇದ್ದುದರಿಂದ ನಮಗೆ ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಲು ಅನುಕೂಲವಾಯಿತು. ಓದಿನ ಜತೆಗೆ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ರೋಗಿಗಳನ್ನು ಪ್ರೀತಿಯಿಂದ ಆರೈಕೆ ಮಾಡುವುದು ನನಗೆ ಸಮಾಧಾನ ಕೊಡುತ್ತದೆ’ ಎಂದು ಹೇಳಿದರು.
ಗೋಕುಲ ಶಿಕ್ಷಣ ಪ್ರತಿಷ್ಠಾನದ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಎಚ್.ಜಿ.ಶ್ರೀವರ, 25 ವಿದ್ಯಾರ್ಥಿಗಳಿಗೆ ಬಿಎಸ್ಸಿ ನರ್ಸಿಂಗ್ ಮತ್ತು 22 ವಿದ್ಯಾರ್ಥಿಗಳಿಗೆ ಪಿ.ಬಿ. (ಪೋಸ್ಟ್ ಬೇಸಿಕ್) ಬಿಎಸ್ಸಿ ನರ್ಸಿಂಗ್ ಪದವಿ ಪ್ರದಾನ ಮಾಡಿದರು.