ಬೆಂಗಳೂರು: `ಎರಡು ಹೊತ್ತಿನ ಊಟ ಹಾಗೂ 300 ರೂಪಾಯಿ ಹಣಕ್ಕಾಗಿ ಪ್ರತಿಭಟನೆಗೆ ಬಂದಿದ್ದ ಮಾವ ಜೀವ ಕಳೆದುಕೊಂಡರು' ಎಂದು ಕೆಪಿಸಿಸಿ ಕಚೇರಿ ಬಳಿ ಗುರುವಾರ ನಡೆದ ಪ್ರತಿಭಟನೆ ವೇಳೆ ಸಾವನ್ನಪ್ಪಿದ ವೇಲು ಅವರ ಸೊಸೆ ಶಾಲಿನಿ ದುಃಖತಪ್ತರಾಗಿ ಹೇಳಿದರು.
`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಶಾಲಿನಿ, `ನಮ್ಮದು ಬಡ ಕುಟುಂಬ. ಅನ್ನಕ್ಕಾಗಿ ಪ್ರತಿದಿನ ದುಡಿಯಬೇಕಾದ್ದು ಅನಿವಾರ್ಯ. ಪ್ರತಿಭಟನೆಯಲ್ಲಿ ಪಾಲ್ಗೊಂಡರೆ ರೂ.300 ಹಾಗೂ ಎರಡು ಹೊತ್ತು ಊಟ ಕೊಡುವುದಾಗಿ ಸ್ಥಳೀಯ ಮುಖಂಡರೊಬ್ಬರು ಹೇಳಿದ್ದರು.
ಅಲ್ಲದೇ, ಪ್ರತಿಭಟನಾ ಸ್ಥಳಕ್ಕೆ ಹೋಗಲು ಬಸ್ ವ್ಯವಸ್ಥೆ ಕೂಡ ಮಾಡಿರುವುದಾಗಿಯೂ ತಿಳಿಸಿದ್ದರು. ಹೀಗಾಗಿ ಮಾವ ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಹೊರಟಿದ್ದರು' ಎಂದು ಕಣ್ಣೀರಿಟ್ಟರು.
ತಮಿಳುನಾಡು ಮೂಲದ ವೇಲು, ಗೌರಿ ಎಂಬುವರನ್ನು ವಿವಾಹವಾಗಿ ಮಹದೇವಪುರ ಸಮೀಪದ ಹಾಲನಾಯಕನಹಳ್ಳಿಯಲ್ಲಿ ಹಲವು ವರ್ಷಗಳಿಂದ ವಾಸವಾಗಿದ್ದರು. ದಂಪತಿಗೆ ಭರತ್ಕುಮಾರ್ ಮತ್ತು ಮುರುಗನ್ ಎಂಬ ಇಬ್ಬರು ಮಕ್ಕಳಿದ್ದು, ರಾಜೇಶ್ವರಿ ಎಂಬ ಮಗಳಿದ್ದಾಳೆ. ಗಂಡು ಮಕ್ಕಳಿಬ್ಬರೂ ನಗರದಲ್ಲಿ ಆಟೊ ಚಾಲಕರಾಗಿದ್ದಾರೆ. ಮೊದಲು ಸೆಕ್ಯುರಿಟಿ ಗಾರ್ಡ್ ಆಗಿದ್ದ ವೇಲು, ಒಂದೂವರೆ ವರ್ಷಗಳ ಹಿಂದೆ ಕೆಲಸ ಬಿಟ್ಟಿದ್ದರು.