ಬೆಂಗಳೂರು: ಅನಧಿಕೃತವಾಗಿ ನಡೆಸಲಾಗುತ್ತಿದ್ದ ಪ್ಲಾಸ್ಟಿಕ್ ಕಾರ್ಖಾನೆ ಮೇಲೆ ದಿಢೀರನೆ ದಾಳಿ ನಡೆಸಿದ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು 250 ಕೆ.ಜಿಗೂ ಹೆಚ್ಚಿನ ಪ್ಲಾಸ್ಟಿಕ್ ವಶಪಡಿಸಿಕೊಂಡರು. ಕಾರ್ಖಾನೆಗೆ ಬೀಗಮುದ್ರೆ ಹಾಕಿದರು.
ದೊಡ್ಡಬಿದರಕಲ್ಲು ವಾರ್ಡ್ನ ಅಂದ್ರಹಳ್ಳಿಯ ಸಾಯಿಬಾಬಾ ದೇವಸ್ಥಾನದ ರಸ್ತೆಯ ಕಾರ್ಖಾನೆ ಮೇಲೆ ನಡೆದ ದಾಳಿ ಯ ನೇತೃತ್ವವನ್ನು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಡಾ.ಮನೋರಂಜನ್ ಹೆಗಡೆ ವಹಿಸಿದ್ದರು.
‘ಇಂತಹ ಅನಧಿಕೃತ ಕಾರ್ಖಾನೆಗಳಿಂದ ಪ್ಲಾಸ್ಟಿಕ್ ಹಾವಳಿ ಹೆಚ್ಚುತ್ತಿದೆ. ಇದರಿಂದ ಪಾಲಿಕೆಗೂ ಕೆಟ್ಟ ಹೆಸರು ಬರುತ್ತಿದೆ. ಅದನ್ನು ತಪ್ಪಿಸಲು ಇಂತಹ ಅನಿರೀಕ್ಷಿತ ದಾಳಿಯ ಕ್ರಮ ವಹಿಸುತ್ತಿದ್ದೇವೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.