ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ, ಆಡಳಿತದಲ್ಲಿ ಬಸವಣ್ಣ ಅವರ ತತ್ವಗಳನ್ನು ಕಾಣಬಹುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಸವ ಕ್ರಾಂತಿ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ಬಸವಣ್ಣ ಅವರ ಹಾದಿಯಲ್ಲಿ ಜನನಾಯಕರು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮೋದಿ ಅವರು ಬಸವಣ್ಣವರ ಹಾದಿಯಲ್ಲಿ ನಡೆಯುತ್ತಿದ್ದಾರೆ. ಹೀಗಾಗಿ ಸಮರ್ಥವಾಗಿ ಆಡಳಿತ ನಡೆಸಲು ಸಾಧ್ಯವಾಗಿದೆ’ ಎಂದರು.
‘ದೇಶದ ಆದಾಯ ಮೂರು ವರ್ಷಗಳಲ್ಲಿ ₹16 ಲಕ್ಷ ಕೋಟಿಗೆ ತಲುಪಿದೆ. ಜಿಎಸ್ಟಿ ಜಾರಿಯಿಂದಾಗಿ ಮುಂದಿನ ಒಂದೇ ವರ್ಷದಲ್ಲಿ ₹20 ಲಕ್ಷ ಕೋಟಿಗೆ ತಲುಪಲಿದೆ’ ಎಂದರು.
ವೇದಿಕೆ ಅಧ್ಯಕ್ಷ ಇಂದ್ರಜಿತ್ ಲಂಕೇಶ್, ‘ಜನ ಸೇವೆ ಮಾಡುವ ಆಸೆ ಇದೆ. ನಿಮ್ಮ ಶಿಷ್ಯನಾಗಿ, ಹಿಂಬಾಲಕನಾಗಿ ಇರುತ್ತೇನೆ. ನಿಮ್ಮ ಆಶೀರ್ವಾದ ಬೇಕು’ ಎಂದು ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಹೇಳಿದರು.
‘ರಾಜಕೀಯಕ್ಕೆ ಬರುವ ಮುನ್ನ 10 ಬಾರಿ ಯೋಚನೆ ಮಾಡಿ’ ಎಂದು ಯಡಿಯೂರಪ್ಪ ಅವರು ಕಿವಿಮಾತು ಹೇಳಿದರು. ಹುತಾತ್ಮ ಯೋಧ ಹನುಮಂತಪ್ಪ ಕೊಪ್ಪದ ಅವರ ಪತ್ನಿ ಮಹಾದೇವಿ ಅವರಿಗೆ ₹1 ಲಕ್ಷ ಸಹಾಯಧನ ವಿತರಿಸಲಾಯಿತು.