ಬೆಂಗಳೂರು: ‘ರಾಜ್ಯ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇಲ್ಲ. ಆದರೆ, ಬಿಜೆಪಿಯ ಸುಳ್ಳು ಪ್ರಚಾರ ಎದುರಿಸುವುದೇ ನಮಗಿರುವ ಸವಾಲು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.
‘ಬಿಜೆಪಿ ನಾಯಕರು ಸುಳ್ಳು ಹೇಳುವ ಮೂಲಕ ಜನರಲ್ಲಿ ಗೊಂದಲವನ್ನುಂಟು ಮಾಡುತ್ತಿದ್ದಾರೆ. ಚುನಾವಣೆ ಗೆಲ್ಲಲು ವಿಷಯಗಳಿಲ್ಲದೆ ಹಿಂಬಾಗಿಲ ಮೂಲಕ ರಾಜಕೀಯ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ಕೇಂದ್ರ ಸರ್ಕಾರ ಚುನಾವಣೆ ಗೆಲ್ಲಲು ಸರ್ಕಾರಿ ಯಂತ್ರ ದುರ್ಬಳಕೆ ಮಾಡುತ್ತಿದೆ. ಕಾಂಗ್ರೆಸ್ ನಾಯಕರು ಮತ್ತು ಅವರ ಆಪ್ತರ ಮೇಲೆ ಒತ್ತಡ ತಂದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದೂ ದೂರಿದರು.
‘ನಮ್ಮ ಸರ್ಕಾರ ರಾಜ್ಯದ ಎಲ್ಲ ವರ್ಗಗಳ ಕೂಗು ಆಲಿಸಿದೆ. ರೈತಪರ ಸರ್ಕಾರ ಎಂಬ ಕಾರಣಕ್ಕೆ ಬೇರೆ ರಾಜ್ಯದ ರೀತಿ ನಮ್ಮಲ್ಲಿ ದಂಗೆ ಆಗಿಲ್ಲ. ಸಂಕಷ್ಟ ಸಂದರ್ಭದಲ್ಲಿ ರೈತರ ಸಾಲ ಮನ್ನಾ ಮಾಡಿದ್ದೇವೆ’ ಎಂದರು.
ಚಿಕ್ಕಪೇಟೆ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ಚಿಕ್ಕಪೇಟೆ ಸುತ್ತಮುತ್ತಲ ಪ್ರದೇಶವನ್ನು ಸ್ಮಾರ್ಟ್ ಮಾಡುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುತ್ತಿದೆ ಎಂದು ಗಾಂಧಿನಗರ ಕ್ಷೇತ್ರದ ಶಾಸಕ ದಿನೇಶ್ ಗುಂಡೂರಾವ್ ಹೇಳಿದರು.
ಮೆಜೆಸ್ಟಿಕ್ ಪ್ರದೇಶದಲ್ಲಿ ಮೆಟ್ರೊ ಕಾಮಗಾರಿ ಕೆಲಸ ಮುಗಿದಿದೆ. ಈ ಪ್ರದೇಶದಸುತ್ತಮುತ್ತಲಿನ ರಸ್ತೆ, ಪಾದಚಾರಿ ಮಾರ್ಗವನ್ನೂ ಅಭಿವೃದ್ಧಿಪಡಿಸಲಾಗುವುದು. ಮಲ್ಲೇಶ್ವರ ಮಂತ್ರಿ ಮಾಲ್ ಪಕ್ಕದಲ್ಲಿರುವ ಜಕ್ಕರಾಯನ ಕೆರೆ ಪ್ರದೇಶದಲ್ಲಿ ಕ್ರೀಡಾ ಸಮುಚ್ಛಯ ನಿರ್ಮಿಸುವ ಉದ್ದೇಶವಿದೆ ಎಂದರು.