ಬೆಂಗಳೂರು: ‘ನಂದನವನ ಎನಿಸಿಕೊಂಡಿದ್ದ ಬೆಂಗಳೂರು ಈಗ ಭಯ ಹುಟ್ಟಿಸುವಷ್ಟರ ಮಟ್ಟಿಗೆ ಬೆಳೆದಿದೆ. ಯೋಜನಾ ರಹಿತವಾದ ನಗರ ಅಭಿವೃದ್ಧಿಯೇ ಇದಕ್ಕೆ ಕಾರಣ’ ಎಂದು ಅಂತರರಾಷ್ಟ್ರೀಯ ವೈಮಾನಿಕ ಹಾಗೂ ವಾತಾವರಣ ವಿಜ್ಞಾನಿ ರೊದ್ದಂ ನರಸಿಂಹ ಬೇಸರ ವ್ಯಕ್ತಪಡಿಸಿದರು.
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ಡೈಲಾಗ್’ ಜರ್ನಲ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಸುಂದರವಾಗಿದ್ದ ಈ ನಗರವನ್ನು ಹಾಳುಮಾಡಿದ್ದಾರೆ. ನೆರೆ ಸಮಸ್ಯೆ, ನೊರೆ ಸಮಸ್ಯೆ, ಗುಂಡಿಗಳು ಬಿದ್ದಿವೆ, ಮರಗಳನ್ನು ಕಡಿಯುತ್ತಿದ್ದಾರೆ. ನಗರಕ್ಕೆ ಹೊಸ ವಿಧಾನದ ಆಡಳಿತ ಬೇಕಾಗಿದೆ. ಉತ್ತಮ ಯೋಜನೆಗಳು ರೂಪಗೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.
ಸಂಶೋಧನೆಗಳಿಗೆ ಹಣದ ಕೊರತೆ: ‘ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆಗೆ ನಮ್ಮಲ್ಲಿ ಸಾಮರ್ಥ್ಯವಿದೆ. ಆದರೆ, ಅದಕ್ಕೆ ತಕ್ಕಂತೆ ಹಣ ವಿನಿಯೋಗವಾಗುತ್ತಿಲ್ಲ. ಇದರಿಂದ ಉತ್ತಮ ಸಂಶೋಧನೆಗಳು ನಡೆಯುತ್ತಿಲ್ಲ. ಭಾರತ ಶೇ 0.8ರಷ್ಟು ಜಿಡಿಪಿಯನ್ನು ಮಾತ್ರ ವಿಜ್ಞಾನ ಸಂಶೋಧನೆಗೆ ನೀಡುತ್ತಿದೆ.’
‘ದಕ್ಷಿಣ ಕೊರಿಯಾ, ಇಸ್ರೇಲ್, ಜಪಾನ್, ಅಮೆರಿಕ ದೇಶಗಳಲ್ಲಿ ವಿಜ್ಞಾನ ಕ್ಷೇತ್ರಕ್ಕೆ ಶೇ 3ರಿಂದ ಶೇ 4ರಷ್ಟು ಜಿಡಿಪಿಯನ್ನು ವಿನಿಯೋಗಿಸುತ್ತಿವೆ. ಇದರಲ್ಲಿ ಕೈಗಾರಿಕೆಗಳಿಂದ ಹೆಚ್ಚಿನ ಪ್ರಮಾಣದ ಹಣ ಬರುತ್ತದೆ. ಈ ಪರಿಪಾಠ ನಮ್ಮ ದೇಶದಲ್ಲೂ ಆರಂಭವಾಗಬೇಕು. ಕೈಗಾರಿಕೆಗಳು ಸಂಶೋಧನೆಗಳಿಗೆ ಹಣ ನೀಡಬೇಕು’ ಎಂದು ಆಗ್ರಹಿಸಿದರು.
‘ವಿಜ್ಞಾನದಲ್ಲಿನ ಹೂಡಿಕೆ, ನೀತಿಗಳು, ಸಮಾಜ ಮತ್ತು ವಿಜ್ಞಾನದ ನಡುವೆ ಸೇತುವೆಯಾಗಿ ಕೆಲಸ ಮಾಡುವ ಅಗತ್ಯ ಈಗಿದೆ. ಅದಕ್ಕೆ ಪೂರಕದ ಆಶಯವನ್ನು ಡೈಲಾಗ್ ಜರ್ನಲ್ ಹೊಂದಿದೆ. ವಿಜ್ಞಾನಿಗಳು ತಮ್ಮ ಆಶಯಗಳನ್ನು ವ್ಯಕ್ತಪಡಿಸಲು ಇದು ದಾರಿಯಾಗಲಿದೆ’ ಎಂದು ಅಭಿನಂದಿಸಿದರು.
ಹಿರಿಯ ವಿಜ್ಞಾನಿ ಪಿ. ಬಲರಾಂ, ‘ವಿಜ್ಞಾನಿಗಳು ಸಂವಹನ ಮಾಡುವುದರಲ್ಲಿ ಬಹಳ ಹಿಂದಿರುತ್ತಾರೆ. ಹಾಗಾಗಿ ಸಾಮಾನ್ಯರು ಮತ್ತು ವಿಜ್ಞಾನಿಗಳ ನಡುವೆ ದೊಡ್ಡ ಅಂತರ ಸೃಷ್ಟಿಯಾಗಿದೆ’ ಎಂದು ಹೇಳಿದರು. ವಿಜ್ಞಾನದ ಬಗೆಗೆ ವಿಜ್ಞಾನಿಗಳು ಮತ್ತು ಸಾಮಾನ್ಯ ಜನರ ದೃಷ್ಟಿಕೋನದಲ್ಲಿ ಅಜಗಜಾಂತರವಿದೆ ಎನ್ನುವುದಕ್ಕೆ ಅಮೆರಿಕದ ಎಎಎಎಸ್ ನಡೆಸಿದ ಸಮೀಕ್ಷೆ ಸಾಕ್ಷ್ಯ ಒದಗಿಸಿತು. ಕುಲಾಂತರಿ ಆಹಾರ ಸೇವೆ ಸುರಕ್ಷಿತವೇ ಎಂಬ ಪ್ರಶ್ನೆಗೆ ಶೇ 37ರಷ್ಟು ಜನರು ಸರಿ ಎಂದು ಪ್ರತಿಕ್ರಿಯಿಸಿದ್ದರು. ಶೇ 88ರಷ್ಟು ವಿಜ್ಞಾನಿಗಳು ಅದನ್ನು ಸುರಕ್ಷಿತ ಎಂದಿದ್ದರು’ ಎಂದು ಅವರು ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.