ಬೆಂಗಳೂರು: ನಗರದ ವಿವಿಧ ಕೆರೆಗಳಲ್ಲಿ ನಿರ್ಮಿಸಲಾಗಿರುವ ಕಲ್ಯಾಣಿಗಳು ಮತ್ತು ಮೊಬೈಲ್ ಟ್ಯಾಂಕರ್ಗಳಲ್ಲಿ ಬುಧವಾರ ರಾತ್ರಿ ವೇಳೆಗೆ ಸುಮಾರು 14 ಸಾವಿರ ಗಣೇಶ ಮೂರ್ತಿಗಳನ್ನು ವಿಸರ್ಜಿ ಸಲಾಗಿದೆ.
ಸ್ಯಾಂಕಿ ಕೆರೆ, ಹಲಸೂರು ಕೆರೆ, ಯಡೆಯೂರು ಕೆರೆ, ಕೈಕೊಂಡನಹಳ್ಳಿ ಕೆರೆಗಳಲ್ಲಿನ ಕಲ್ಯಾಣಿಗಳು ಸೇರಿದಂತೆ ನಗರದ 30 ಕೆರೆಗಳಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಅನುಮತಿ ನೀಡಲಾಗಿದೆ. ಮೂರ್ತಿಗಳ ವಿಸರ್ಜನೆಗೆ ನೆರವು ನೀಡಲು ಪ್ರತಿ ಕೆರೆಗಳ ಬಳಿಯೂ ಪಾಲಿಕೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
‘ನಗರದ ಕೆರೆಗಳು ಹಾಗೂ ವಿವಿಧ ಸ್ಥಳಗಳಲ್ಲಿ ಇರುವ 106 ಮೊಬೈಲ್ ಟ್ಯಾಂಕರ್ಗಳಲ್ಲಿ ಬುಧವಾರ ರಾತ್ರಿಯವರೆಗೆ ಸುಮಾರು 14 ಸಾವಿರ ಗಣೇಶ ಮೂರ್ತಿಗಳ ವಿಸರ್ಜನೆ ನಡೆದಿದೆ. ಸಾಮಾನ್ಯವಾಗಿ ಮೂರ್ತಿ ಪ್ರತಷ್ಠಾಪಿಸಿದ ಮೂರನೇ ದಿನ ವಿಸರ್ಜನೆ ಹೆಚ್ಚಾಗಿರುತ್ತದೆ. ಆದರೆ, ಈ ಬಾರಿ ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಮೂರ್ತಿಗಳು ವಿಸರ್ಜನೆಯಾಗಿದ್ದವು’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
‘ನಾಲ್ಕನೇ ದಿನ ಮೂರ್ತಿ ವಿಸರ್ಜನೆ ಮಾಡ ಬಾರದೆಂಬ ನಂಬಿಕೆಯಿಂದ ಗುರುವಾರ ಹೆಚ್ಚಿನ ಸಂಖ ್ಯೆಯಲ್ಲಿ ಮೂರ್ತಿಗಳು ವಿಸರ್ಜನೆಯಾಗಿಲ್ಲ. ಗುರುವಾರ ರಾತ್ರಿಯವರೆಗೆ ಸುಮಾರು ಮೂರು ಸಾವಿರ ಮೂರ್ತಿಗಳ ವಿಸರ್ಜನೆ ನಡೆದಿದೆ. ಹಲಸೂರು ಕೆರೆಯಲ್ಲಿ ಕ್ರೇನ್ ಸಹಾಯದಿಂದ ಗಣೇಶ ಮೂರ್ತಿ ಗಳನ್ನು ವಿಸರ್ಜನೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.
‘ನಗರದ ಎಲ್ಲ ಕೆರೆಗಳ ಕಲ್ಯಾಣಿಗಳಿಂದ ಈವರೆಗೆ ಸುಮಾರು 20 ಲೋಡ್ನಷ್ಟು ಮೂರ್ತಿ ಅವಶೇಷವನ್ನು ಹೊರ ತೆಗೆಯಲಾಗಿದೆ. ಈ ಅವಶೇಷವನ್ನು ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳಿಸಲಾಗುತ್ತಿದೆ. ಕಲ್ಯಾಣಿಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವ ಮುನ್ನ ಕಲ್ಯಾಣಿಗಳ ನೀರನ್ನು ಹೊರ ಹಾಕಬೇಕಾಗುತ್ತದೆ. ಕಲ್ಯಾಣಿಯಲ್ಲಿನ ನೀರು ಒಣಗಿದ ನಂತರ ಮಣ್ಣನ ್ನು ಹೊರತೆಗೆದು, ಕಲ್ಯಾಣಿಗಳನ್ನು ಸ್ವಚ್ಛಗೊಳಿಸಲಾಗುವುದು’ ಎಂದು ಅವರು ತಿಳಿಸಿದರು.