ಬೆಂಗಳೂರು: `ಪ್ರಸ್ತುತ ಸಮಾಜದಲ್ಲಿರುವ ನಂಬಿಕೆ ಮತ್ತು ಆಚರಣೆಗಳ ಬಗ್ಗೆ ಮಹಿಳೆಯರು ವಿಚಾರ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಆತ್ಮವಿಶ್ವಾಸವನ್ನು ಪಡೆಯಬೇಕು' ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಟಿ.ಡಿ.ಕೆಂಪರಾಜು ತಿಳಿಸಿದರು.
ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ `ನಂಬಿಕೆ ಮತ್ತು ಮಹಿಳೆ' ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
`ಹೊಸ ಬಗೆಯ ಆಲೋಚನೆಗಳಿಗೆ ತೆರೆದುಕೊಳ್ಳುವುದರಿಂದ ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಬಹುದು. ನಂಬಿಕೆ ಮತ್ತು ಆಚರಣೆಗಳಲ್ಲಿರುವ ಶೋಷಣೆಯ ಮನೋಭಾವವನ್ನು ಪ್ರತಿಭಟಿಸಿ' ಎಂದು ಕರೆ ನೀಡಿದರು.
`ಎಲ್ಲ ಧರ್ಮಗಳಲ್ಲಿಯೂ ಹೆಣ್ಣುಮಕ್ಕಳನ್ನು ನಿರ್ಬಂಧಿಸುವುದಕ್ಕಾಗಿಯೇ ಹಲವು ಆಚರಣೆಗಳು ಚಾಲ್ತಿಯಲ್ಲಿವೆ. ಆದರೆ, ಪ್ರಗತಿಪರ ಹಾಗೂ ವೈಚಾರಿಕ ಮನೋಧರ್ಮದ ಸ್ತ್ರೀಯರು ಇಂತಹ ಹಲವು ನಿರ್ಬಂಧಗಳಿಂದ ಹೊರಬರಲು ಹೋರಾಟ ನಡೆಸಿದ್ದಾರೆ. ಈ ನೆಲದ ಸಂಸ್ಕೃತಿಯೊಂದಿಗೆ ಸ್ವಾಭಿಮಾನವನ್ನು ಹೊಂದುವ ಬಗ್ಗೆ ಚಿಂತನೆ ನಡೆಸಬೇಕು' ಎಂದು ಹೇಳಿದರು.
ಕನ್ನಡ ಅಧ್ಯಯನ ಕೇಂದ್ರದ ಡಾ.ಎಂ.ಸುಮಿತ್ರಾ, `ಹಲವು ವೈರುಧ್ಯಗಳ ನಡುವೆಯೂ ಮಹಿಳೆಯರ ಸವಾಲುಗಳು ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು, ಶಿಕ್ಷಣ ಹಾಗೂ ವೈಚಾರಿಕ ಮನೋಧರ್ಮದಿಂದ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು' ಎಂದರು.
ಪ್ರಾಧ್ಯಾಪಕ ಡಾ.ಸಿ.ಡಿ.ವೆಂಕಟೇಶ್, ಕೊಳ್ಳೆಗಾಲ ತಾಲೂಕಿನ ಸ್ವ ಸಹಾಯ ಸಂಘದ ಸದಸ್ಯೆ ಭಾಗ್ಯಮ್ಮ ಇತರರು ಉಪಸ್ಥಿತರಿದ್ದರು.