ಯಲಹಂಕ: `ಮೂಡಲಪಾಯ ಯಕ್ಷಗಾನ ಕಲೆಯನ್ನು ಹಿರಿಯ ಯಕ್ಷಗಾನ ಕಲಾವಿದರು ಉಳಿಸಿ, ಬೆಳೆಸಿ, ಪೋಷಿಸಿಕೊಂಡು ಬಂದಿರುವುದರಿಂದ ಈ ಕಲೆ ಗ್ರಾಮೀಣ ಜನರ ಮನದಲ್ಲಿ ಇಂದಿಗೂ ಉಳಿದುಕೊಂಡು ಬಂದಿದೆ~ ಎಂದು ಶಾಸಕ ಕೃಷ್ಣ ಬೈರೇಗೌಡ ಹೇಳಿದರು.
ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ಬಾಗಲೂರು ಗ್ರಾಮದಲ್ಲಿ ಅಶ್ವಿನ್ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಯಕ್ಷಗಾನ ಕಲಾವಿದರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, `ಪ್ರೋತ್ಸಾಹದ ಕೊರತೆಯಿಂದಾಗಿ ಯಕ್ಷಗಾನ ಕಲೆ ಬೆಳವಣಿಗೆಯಾಗುತ್ತಿಲ್ಲ. ಈ ನಿಟ್ಟಿನಲ್ಲಿ ಅಪರೂಪವಾದ ಈ ಕಲೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ~ ಎಂದರು.
ಜಾನಪದ ಕಲಾವಿದ ಅಪ್ಪಗೆರೆ ತಿಮ್ಮರಾಜು ಮಾತನಾಡಿ, `ಮೂಡಲಪಾಯ ಯಕ್ಷಗಾನ ಕಲೆ ತನ್ನದೇ ಆದ ವಿಶಿಷ್ಠ ಲಕ್ಷಣಗಳಿಂದ ಕೂಡಿದ್ದು, ಗ್ರಾಮೀಣ ಜನರ ಬಹುಮುಖ್ಯವಾದ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಈ ಕಲೆಯ ಅಭಿವೃದ್ಧಿಗೆ ಸರ್ಕಾರ ಅಗತ್ಯ ಧನಸಹಾಯ ಒದಗಿಸಬೇಕು.
ಯಕ್ಷಗಾನ ಕಲಾವಿದರಿಗೆ ಮಾಸಾಶನ ನೀಡುವುದರ ಜತೆಗೆ ಯಕ್ಷಗಾನ ತರಬೇತಿ ಶಿಬಿರಗಳನ್ನು ನಡೆಸಲು ಶಾಲೆಗಳನ್ನು ತೆರೆಯಬೇಕು~ ಎಂದು ಒತ್ತಾಯಿಸಿದರು.
ಜಿ.ಪಂ. ಸದಸ್ಯ ದಾನೇಗೌಡ ಮಾತನಾಡಿದರು. ತಾ.ಪಂ. ಉಪಾಧ್ಯಕ್ಷೆ ಲಕ್ಷ್ಮೀ ರಮೇಶ್, ಸದಸ್ಯರಾದ ಬಿ.ಸಿ.ಲೋಕೇಶ್, ಬಾಲಮ್ಮ, ಎಪಿಎಂಸಿ ಸದಸ್ಯ ಶಿವಣ್ಣ, ಬಾಗಲೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಅಪ್ಪಣ್ಣಗೌಡ, ಗ್ರಾ.ಪಂ. ಸದಸ್ಯರಾದ ನರಸಿಂಹ, ಸಯ್ಯದ್ ಶಬ್ಬೀರ್, ಅಶ್ವಿನ್ ಗ್ರಾಮೀಣ ಶಿಕ್ಷಣ ಮತ್ತು ಅಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಎಂ.ಅಮರನಾರಾಯಣ ಮತ್ತಿತರರು ಉಪಸ್ಥಿತರಿದ್ದರು.